ಚೆನ್ನೈ: ತಮಿಳುನಾಡಿನ ಕಲ್ಲಕುರಿಚ್ಚಿಯಲ್ಲಿ ನಡೆದ ವಿಷಯುಕ್ತ ಮದ್ಯ ಸೇವನೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ೬೩ಕ್ಕೆ ಏರಿದ್ದು, ಹಲವರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ.
ಒಟ್ಟು ೨೧೯ ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಬಾಧಿತರ ಪೈಕಿ ಹಲವರು ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ವಿಷಯುಕ್ತ ಮದ್ಯ ಮಾರಾಟ ತಡೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಕಲ್ಲಕುರಿಚಿ ಜಿಲ್ಲಾಧಿಕಾರಿ ಪ್ರಶಾಂತ್ ತಿಳಿಸಿದ್ದಾರೆ.
ಅಗತ್ಯ ಪ್ರಮಾಣದ ಔಷಧ ದಾಸ್ತಾನು ಇದೆ. ವಿಷಯುಕ್ತ ಮದ್ಯ ಸೇವಿಸಿದವರು ಸ್ವಯಂಪ್ರೇರಣೆಯಿಂದ ಚಿಕಿತ್ಸೆ ಪಡೆದು ಸಂಭವನೀಯ ಅಪಾಯದಿಂದ ಪಾರಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಲ್ಲದೇ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಪರಿಶೀಲನೆ ಮುಂದುವರಿಸಿದ್ದಾರೆ. ಕಲ್ಲಕುರಿಚ್ಚಿಯಲ್ಲಿ ನಡೆದ ಅವಘಡ ಕುರಿತು ಸಿಬಿಐ ತನಿಖೆಗೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.