ಬೆಂಗಳೂರು: “ಕರ್ನಾಟಕವನ್ನು ದೇಶದ ನಂ.1 ಉತ್ಪಾದನಾ ವಲಯವನ್ನಾಗಿ ರೂಪಿಸಲು ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ,” ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ತಮ್ಮ ಇಲಾಖೆಯ ಎರಡು ವರ್ಷಗಳ ಸಾಧನೆ ಮತ್ತು ಭವಿಷ್ಯದ ಯೋಜನೆಗಳ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ವಿಯೆಟ್ನಾಂ ಹಾಗೂ ಇತರ ದೇಶಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಉತ್ಪಾದನಾ ಚಟುವಟಿಕೆಗಳಿಗೆ ಹೆಚ್ಚುವರಿ ಆದ್ಯತೆ ನೀಡಲಾಗಿದೆ. ಈಗಿರುವ ನಾಲ್ಕನೇ ಸ್ಥಾನದಿಂದ ನಂ.1 ಸ್ಥಾನಕ್ಕೆ ಕೊಂಡೊಯ್ಯುವ ಪ್ರಯತ್ನಗಳು ನಡೆಯುತ್ತಿವೆ,” ಎಂದರು.
ರಾಜ್ಯದಲ್ಲಿ ವಿವಿಧ ಯೋಜನೆಗಳು ರೂಪಿಸಲ್ಪಟ್ಟಿದ್ದು, ಶ್ರೀನಿವಾಸಪುರದಲ್ಲಿ ಫಾರ್ಮ್ ಪಾರ್ಕ್, ವಿಜಯಪುರದಲ್ಲಿ ಎಲೆಕ್ಟ್ರಿಕ್ ಸೆಲ್ ಉತ್ಪಾದನೆ, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್, ಹುಬ್ಬಳ್ಳಿಯಲ್ಲಿ ನವೋದ್ಯಮ ಅಭಿವೃದ್ಧಿ ಮತ್ತು ದಾಬಸ್ಪೇಟೆ-ದೊಡ್ಡಬಳ್ಳಾಪುರ ನಡುವೆ ಆರೋಗ್ಯ-ಶಿಕ್ಷಣ ಪಾರ್ಕ್ ಯೋಜನೆಗಳನ್ನು ಪ್ರಕಟಿಸಿದರು.
ಮೈಸೂರು ಸ್ಯಾಂಡಲ್ (ಕೆಎಸ್ಡಿಸಿಎಲ್) ಈ ತಿಂಗಳು ₹180 ಕೋಟಿ ವಹಿವಾಟು ದಾಖಲಿಸಿದೆ. ಮುಂದಿನ ಮೂರು ವರ್ಷದಲ್ಲಿ ₹5,000 ಕೋಟಿ ಗುರಿ ಇದೆ.
ರಾಜ್ಯಕ್ಕೆ ಒಟ್ಟು ₹6,58,660 ಕೋಟಿ ಹೂಡಿಕೆ ಒಪ್ಪಂದವಾಗಿದೆ, ಇದರಿಂದ 2.3 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ. ಏಕಗವಾಕ್ಷಿ ಸಮಿತಿಯ ಮೂಲಕ ₹1.13 ಲಕ್ಷ ಕೋಟಿ ಹೂಡಿಕೆ, 2.23 ಲಕ್ಷ ಉದ್ಯೋಗಗಳ ಅನುಮೋದನೆ ದೊರೆತಿದೆ.
ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಈಗ ₹56,000 ಕೋಟಿ ಹೂಡಿಕೆಯಿಂದ ದೇಶದಲ್ಲಿ ಎರಡನೇ ಸ್ಥಾನಕ್ಕೇರಿದೆ. ₹1.65 ಲಕ್ಷ ಕೋಟಿ ಮೌಲ್ಯದ ರಫ್ತಿನೊಂದಿಗೆ ಕರ್ನಾಟಕ ದೇಶದ ಅಗ್ರಸ್ಥಾನದಲ್ಲಿದೆ ಎಂದು ಪಾಟೀಲ್ ತಿಳಿಸಿದರು.