ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆ ವಿಷಯಾಧಾರಿತ ದುನಿಯಾ ವಿಜಯ್ ನಾಯಕತ್ವದ “ಲ್ಯಾಂಡ್ ಲಾರ್ಡ್” ಚಲನಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
80-90ರ ದಶಕದ ಹಳ್ಳಿಯ ಕಥೆಯನ್ನು ಆಧರಿಸಿದ ಚಿತ್ರ ‘ಲ್ಯಾಂಡ್ಲಾರ್ಡ್’ ಆಗಿದ್ದು, ಕೋಡಿಹಳ್ಳಿ ರಾಚಯ್ಯನಾಗಿ ದುನಿಯಾ ವಿಜಯ್ ಅಭಿನಯಿಸಿದ್ದಾರೆ. ಭೂಮಿಗಾಗಿ ಹೋರಾಟದ ಕಥೆಯ ನಿರೂಪಣೆಯನ್ನು ಒಳಗೊಂಡಿದೆ. ಜಡೇಶ್ ಹಂಪಿ ನಿರ್ದೇಶನದ ಚಿತ್ರವು ಬಡವರ ಹಕ್ಕುಗಳಿಗಾಗಿ ಹೋರಾಟದ ಸಂದೇಶ ನೀಡುತ್ತದೆ.
ರಚಿತಾ ರಾಮ್ , ರಾಜ್ ಬಿ ಶೆಟ್ಟಿ, ಹಿರಿಯ ನಟಿ ಉಮಾಶ್ರೀ ಚಿತ್ರದಲ್ಲಿ ನಟಿಸಿದ್ದು, ಹಳ್ಳಿಯಲ್ಲಿ ಭೂ ಮಾಲೀಕರು ಮತ್ತು ಕಾರ್ಮಿಕ ವರ್ಗದ ನಡುವೆ ಭೂಮಿಗಾಗಿ ನಡೆಯುವ ಹೋರಾಟದ ಚಿತ್ರ ವಿದೆ. ಒಟ್ಟಾರೆ ಸರ್ವರಿಗೂ ಸಮಾನತೆ ಇರಬೇಕು ಎಂಬ ಸಂವಿಧಾನದ ಮೂಲ ಆಶಯ ಎತ್ತಿಹಿಡಿಯುವ ಕಥೆ ಇದಾಗಿದೆ.
ರಾಜ್ ಬಿ ಶೆಟ್ಟಿ ಊರಲ್ಲಿ ದ್ಬಾಳಿಕೆ ನಡೆಸುವ ಧಣಿಯಾಗಿದ್ದು, ಕಾನೂನು, ಪೊಲೀಸ್ ವ್ಯವಸ್ಥೆ ಅವರ ಪರ ನಿಂತು ಬಡವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ಸಿನಿಮಾ ತೋರಿಸುತ್ತದೆ. ಅವರು ಈ ಸಿನಿಮಾದಲ್ಲಿ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ತಮ್ಮ ಛಾಪು ಮೂಡಿಸಿದ್ದಾರೆ. ಅವರಿಂದಾಗಿ ಸಿನಿಮಾದ ತೂಕ ಹೆಚ್ಚಿದೆ. ರಾಜ್ ಬಿ. ಶೆಟ್ಟಿ ಅವರು ಈ ಚಿತ್ರದಲ್ಲಿ ವಿಲನ್ ಆಗಿ ಘರ್ಜಿಸಿದ್ದಾರೆ. ಬಡವರ ರಕ್ತ ಹೀರುವ ಖಳನಾಗಿ ಅವರು ಇಡೀ ಸಿನಿಮಾವನ್ನು ಆವರಿಸಿದ್ದಾರೆ. ಲ್ಯಾಂಡ್ಲಾರ್ಡ್ ಸಿನಿಮಾದಲ್ಲಿ ಕಟುಕನಾಗಿ ಕಾಣಿಸಿಕೊಂಡಿದ್ದಾರೆ. ಪದ್ಮಾ ಎಂಬ ದೇವದಾಸಿ ಪಾತ್ರದಲ್ಲಿ ಭಾವನಾ ರಾವ್ ಕಾಣಿಸಿಕೊಂಡಿದ್ದಾರೆ.



