ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಶಿಕ್ಷಕರ ನಿವೃತ್ತಿ ವಯಸ್ಸನ್ನು ರಾಜ್ಯ ಸರ್ಕಾರ 60 ವರ್ಷದಿಂದ 70 ವರ್ಷಕ್ಕೇರಿಸಿ ಅವರ ಅನುಭವದ ಅನುಕೂಲ ಪಡೆದು ವಿದ್ಯಾರ್ಥಿಗಳು ಶೈಕ್ಷಣಿಕ ವಾಗಿ ಎತ್ತರದ ಸ್ಥಾನಕ್ಕೇರಲು ಹೊಸ ಕಾಯಿದೆ ರೂಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಈಶ್ವರ ನಗರದಲ್ಲಿ ನಿವೃತ ಶಿಕ್ಷಕಿ ಸಿ.ಇ.ತ್ರಿವೇಣಿಯವರಿಗೆ ಸಮಾನ ಮನಸ್ಕ ಶಿಕ್ಷಕರು ಮತ್ತು ಬಡಾವಣೆಯ ನಿವಾಸಿಗಳು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರಸ್ತುತ ಬುದ್ದಿವಂತ ಮತ್ತು ಅನುಭವಿ ಶಿಕ್ಷಕರ ಕೊರತೆಯಿದ್ದು ನಿವೃತ್ತಿ ವಯಸ್ಸು ಏರಿಸಿದರೆ ಇದರ ಬವಣೆ ನೀಗಲಿದೆ ಎಂದರು.
ಅಕ್ಷರ ಮತ್ತು ಆರೋಗ್ಯ ಸುಭಿಕ್ಷವಾಗಿ ಇರದ ದೇಶ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಆದರೆ ರಾಜ್ಯದಲ್ಲಿ ಅಧಿಕಾರ ದಲ್ಲಿರುವ ಸಿದ್ದರಾಮ್ಮಯ್ಯನವರ ಸರ್ಕಾರದಲ್ಲಿ ಇವೆರಡು ಇಲ್ಲದೆ ಮಹಿಳೆಯರಿಗೆ 2 ಸಾವಿರ ನೀಡಿ ಉಚಿತ ಬಸ್ಸ್ ಪ್ರಯಾಣ ನೀಡಿರುವುದೇ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
2004ರಲ್ಲಿ ನಾನು ಶಿಕ್ಷಣ ಸಚಿವನಾಗಿದ್ದಾಗ ಅಂದು ರಾಷ್ಟ್ರಪತಿಗಳಾಗಿದ್ದ ಭಾರತ ರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ನನ್ನನ್ನು ಸೇರಿದಂತೆ ಕೆಲವು ಶಿಕ್ಷಕಬಾಂದವರನ್ನು ಕರೆಯಿಸಿ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿಯೇ ಉತ್ತುಂಗ ಸ್ಥಾನದಲ್ಲಿದೆ ಎಂದು ಸನ್ಮಾನಿಸಿದ್ದರು ಎಂದು ನೆನೆಸಿಕೊಂಡರು.
ಇಲಾಖೆಯಲ್ಲಿನ ನನ್ನ ಬಿಗಿ ಕ್ರಮಗಳು ಮತ್ತು ಕಠಿಣ ನಿಯಮಗಳನ್ನು ಸಹಿಸದ ಕೆಲವು ಮಠಾಧೀಶರು, ಚರ್ಚ್ ನ ಪಾದ್ರಿಗಳು ಮತ್ತು ಮಸೀದಿಯ ಮುಲ್ಲಾಗಳು ಮುಖ್ಯ ಮಂತ್ರಿಗಳಿಗೆ ಚಾಡಿ ಹೇಳಿ ನನ್ನನ್ನು ಸಚಿವ ಸ್ಥಾನದಿಂದ ತೆಗೆಸಿದ್ದರು ಇದು ದೇಶದ ಪ್ರಸ್ತುತ ಸ್ಥಿತಿ ಎಂದು ವಿಷಾದ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯರು ಸತ್ಯ ಹೇಳುವವರು ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುವವರು ಯಾರಿಗೂ ಬೇಡವಾಗಿದೆಂದು ನೊಂದು ನುಡಿದರು.
ಶಿಕ್ಷಕರುಗಳು ಸೇವೆಯಿಂದ ನಿವೃತರಾದ ನಂತರ ತಮ್ಮ ವಿದ್ಯೆಯನ್ನು ಧಾರೆ ಎರೆದು ಸದೃಢ ಮತ್ತು ಶಿಕ್ಷಿತ ಸಮಾಜದ ಕಟ್ಟುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರಲ್ಲದೆ ಪ್ರತಿಯೊಬ್ಬರು ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಿವೃತ ಡಿಡಿಪಿಐ ಸಿ.ಎಸ್.ರಾಮಲಿಂಗು, ಶಿಕ್ಷಣ ತಜ್ಞ ಡಾ.ಜಿ.ಅಚ್ಚುತರಾವ್,, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರಾಜಶೇಖರ, ರಾಜ್ಯ ಶಾಸ್ತ್ರ ಉಪನ್ಯಾಸಕ ಕೆ.ಎಲ್.ರಮೇಶ್ ಮಾತನಾಡಿದರು. ಅರಕೆರೆವಿರಕ್ತ ಮಠದ ಸಿದ್ದೇಶ್ವರ ಶ್ರೀಗಳ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ ಶಿಕ್ಷಕಿ ಸಿ.ಇ.ತ್ರಿವೇಣಿ ದಂಪತಿಗಳನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪುರಸಭೆ ಮಾಜಿ ಉಪಾಧ್ಯಕ್ಷ ನಾರತ್ನಮ್ಮ, ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಕೆ.ಎಲ್.ಜಗದೀಶ್, ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು, ವಕೀಲ ಕೆ.ವಿ.ಮಹೇಶ್, ಮುಖಂಡರಾದ ಅರುಣ್ ಬಿ ನಗರಗುಂದ್, ಸಣ್ಣಲಿಂಗಪ್ಪ, ಎಂ.ಬಿ.ಲೋಕನಾಥ್, ನಾಗಭೂಷಣ್, ಮಂಚೇಗೌಡ, ಮತ್ತಿತರರು ಹಾಜರಿದ್ದರು.