ನವದೆಹಲಿ: ರಿಯಾಸಿಯಲ್ಲಿ ಇತ್ತೀಚೆಗೆ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಪೊಲೀಸರು ಹಕಮ್ ದಿನ್ ಎಂಬಾತನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಎಸ್ಪಿ ಮೊಹಿತಾ ಶರ್ಮಾ ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದ ಒಬ್ಬನನ್ನು ಬಂಧಿಸಿದ್ದೇವೆ. ರಜೌರಿ ನಿವಾಸಿ ಹಕಮ್ ದಿನ್ ದಾಳಿಯ ಮಾಸ್ಟರ್ ಮೈಂಡ್ ಅಲ್ಲ. ಆದರೆ, ದಾಳಿ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಭಯೋತ್ಪಾದಕರು ಗುಪ್ತವಾಗಿ ಸಂಚರಿಸಲು ದಿನ್ ಮಾರ್ಗದರ್ಶನ ನೀಡುತ್ತಿದ್ದ.
ಜತೆಗೆ ಅವರಿಗೆ ಆಹಾರ, ಆಶ್ರಯ ನೀಡುತ್ತಿದ್ದ. ಅದಕ್ಕಾಗಿ ಆತನಿಗೆ 6000 ರೂ. ನೀಡಲಾಗಿತ್ತು. ಪ್ರಸ್ತುತ ಘಟನೆಯಲ್ಲೂ ಭಯೋತ್ಪಾದಕರಿಗೆ ದಾಳಿ ನಡೆಸಲು ಸಹಾಯ ಮಾಡಿದ್ದಾನೆ. ಮುಂದಿನ ಹಂತದ ತನಿಖೆ ನಡೆಯುತ್ತಿದೆ.
ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 150 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ರಿಯಾಸಿ ದಾಳಿಯಲ್ಲಿ 10 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದರು. ಆ ಬಳಿಕವೂ ಕೆಲ ಭಯೋತ್ಪಾದಕ ಕೃತ್ಯ ವರದಿಯಾದ ಹಿನ್ನೆಲೆ ಉಗ್ರರ ಸೆರೆಗೆ
ಪೊಲೀಸರು ಬಲೆ ಬೀಸಿದ್ದಾರೆ.