ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿನ ವಸತಿ ನಿಗಮದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರ ಆರೋಪದ ಆಡಿಯೋ ವೈರಲ್ ಆದ ಬೆನ್ನಲ್ಲೇ, ಈಗ ಮತ್ತೋರ್ವ ಕಾಂಗ್ರೆಸ್ ಶಾಸಕ ರಾಜು ಕಾಗೆ ಕೂಡ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಗವಾಡ ತಾಲೂಕಿನ ಐನಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜು ಕಾಗೆ, “ಬಿ.ಆರ್. ಪಾಟೀಲ್ ಅವರು ಹೇಳಿದ್ದು ನಿಜ. ನನ್ನ ಪರಿಸ್ಥಿತಿಯೂ ಅದೇ. ನನ್ನ ಕ್ಷೇತ್ರದಲ್ಲೂ ಯಾವುದೇ ಕೆಲಸವಾಗುತ್ತಿಲ್ಲ,” ಎಂದು ಹೇಳಿದ್ದಾರೆ.
ಅವರ ಪ್ರಕಾರ, 25 ಕೋಟಿ ರೂಪಾಯಿ ವಿಶೇಷ ಅನುದಾನದಲ್ಲಿ 12 ಕೋಟಿ ರಸ್ತೆ ಹಾಗೂ 13 ಕೋಟಿ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರಾಗಿದೆ. ಆದರೆ ಎರಡು ವರ್ಷವಾದರೂ ವರ್ಕ್ ಆರ್ಡರ್ ಕೂಡ ಹೊರಬಿದ್ದಿಲ್ಲ.
“ನಮ್ಮ ಸರಕಾರದಲ್ಲಿ ಅಧಿಕಾರಿಗಳು ಕೆಲಸವನ್ನೇ ಮಾಡುತ್ತಿಲ್ಲ. ಆಡಳಿತ ಸಂಪೂರ್ಣ ವಿಫಲವಾಗಿದೆ. ನನಗೂ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ,” ಎಂದು ಅವರು ಹೇಳಿದ್ದಾರೆ.