ಚಿತ್ರದುರ್ಗ: ೨೦೨೩ರ ಡಿಸೆಂಬರ್ನಲ್ಲಿ ಪಾಳುಬಿದ್ದ ಮನೆಯೊಂದರಲ್ಲಿ ಐವರ ಅಸ್ಥಿಪಂಜರ ಪತ್ತೆಯಾದ ನಿಗೂಢ ಪ್ರಕರಣ ಆತ್ಮಹತ್ಯೆ ಎಂದು ತಿಳಿದುಬಂದಿದ್ದು, ನಿದ್ದೆ ಮಾತ್ರೆ ಸೇವಿಸಿ ಸಾವಿಗೆ ಶರಣಾಗಿರಬಹುದು ಎಂದು ವಿಧಿವಿಜ್ಞಾನ ತಜ್ಞರು ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರು, ಜಿಲ್ಲಾ ಪೊಲೀಸರಿಗೆ ವಿಧಿವಿಜ್ಞಾನ ತಜ್ಞರಿಂದ ಬಂದಿರುವ ಅಂತಿಮ ವರದಿಯಲ್ಲಿ ನಿದ್ದೆ ಮಾತ್ರೆಯಲ್ಲಿ ಸಿಗುವ ನಾರ್ಡಾಜೆಪಾಮ್ ಮತ್ತು ಆಕ್ಸಾಜೆಪಮ್ ಔಷಧಗಳಿಂದ ಸಾವು ಸಂಭವಿಸಿರಬಹುದು ಎಂದು ಸೂಚಿಸಲಾಗಿದೆ.
ಆದಾಗ್ಯೂ, ಸಾವಿಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ. ಇದಲ್ಲದೆ, ವಿಧಿವಿಜ್ಞಾನ ತಂಡ ಮನೆಯಲ್ಲಿದ್ದ ೭೧ ಸಾಕ್ಷ್ಯಗಳನ್ನು ಕಲೆ ಹಾಕಲಾಗಿತ್ತು. ಎಲ್ಲಾ ಸ್ಯಾಂಪಲ್ಸ್ಗಳನ್ನು ದಾವಣಗೆರೆ, ಬೆಂಗಳೂರು ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಇದು ತುಂಬಾ ಸೆನ್ಸಿಬಲ್ ಕೇಸ್ ಆಗಿದ್ದರಿಂದ ರಿಪೋರ್ಟ್ ತಡವಾಗಿ ಬಂದಿದೆ ಎಂದರು.
ಅಸ್ಥಿಪಂಜರಗಳ ಮೃದು ಅಂಗಾಂಶಗಳ ವಿಶ್ಲೇಷಣೆಯು ಔಷಧಿಗಳ ಉಪಸ್ಥಿತಿಯನ್ನು ತೋರಿಸಿದೆ. ಆದರೆ ಅವರು ಸೈನೈಡ್ ಸೇವಿಸಿದ್ದಾರೆ ಎಂದು ಸೂಚಿಸುವ ಯಾವುದೇ ವಸ್ತು ಇಲ್ಲ ಎಂದು ಅವರು ಹೇಳಿದರು.
ಚಿತ್ರದುರ್ಗದ ಚಳ್ಳಕೆರೆ ಗೇಟ್ ಸಮೀಪದ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಜಗನ್ನಾಥರೆಡ್ಡಿ ಎಂಬುವವರ ಮನೆಯಲ್ಲಿ ೨೦೨೩ರ ಡಿಸೆಂಬರ್ ೨೮ರಂದು ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣಾರೆಡ್ಡಿ ಹಾಗೂ ನರೇಂದ್ರರೆಡ್ಡಿ ಸೇರಿದಂತೆ ಐವರ ಅಸ್ಥಿಪಂಜರ ಪತ್ತೆಯಾಗಿದ್ದವು.
ಜಗನ್ನಾಥ ರೆಡ್ಡಿ ಕುಟುಂಬ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತಹತ್ಯೆಗೆ ಶರಣಾಗಿದ್ದಾರೆ ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು. ಬಳಿಕ ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದರು.