Friday, May 30, 2025
Google search engine

Homeರಾಜ್ಯಸುದ್ದಿಜಾಲಮೀನಿನ ನಗರಿಯಲ್ಲಿ ಮತ್ತೆ ಹರಿದ ನೆತ್ತರು: ನಿಲ್ಲದ ಜೀವ ಹರಣ: ಬದುಕು ಅತಂತ್ರ

ಮೀನಿನ ನಗರಿಯಲ್ಲಿ ಮತ್ತೆ ಹರಿದ ನೆತ್ತರು: ನಿಲ್ಲದ ಜೀವ ಹರಣ: ಬದುಕು ಅತಂತ್ರ

  • ಶಂಶೀರ್ ಬುಡೋಳಿ, ಮಂಗಳೂರು

ಮಂಗಳೂರು (ದಕ್ಷಿಣ ಕನ್ನಡ): ಆ ಯುವಕ ತನ್ನವ್ರ ಜೊತೆಗೆ ಮರಳು ಸಾಗಾಟದ ಕೆಲ್ಸದಲ್ಲಿದ್ರು. ಹಳ್ಳಿಯಲ್ಲಿ ಕೆಲ್ಸ‌ ಮಾಡ್ತಿದ್ದಾಗ ಇದ್ದಕ್ಕಿದ್ದಂತೆ ದುಷ್ಕರ್ಮಿಗಳ ತಂಡವೊಂದು ಬಂದು ತಲ್ವಾರ್ ದಾಳಿ‌ ನಡೆಸಿದೆ.‌ ಪರಿಣಾಮ ಆ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ರೆ ಆತನ‌ ಜೊತೆಗಿದ್ದ ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಈ ಘಟನೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆ ಇಂದು ಬಂದ್ ಆಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯು ಕರಾಳ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಮೇ ತಿಂಗಳಲ್ಲಿ ಈ ಜಿಲ್ಲೆಯಲ್ಲಿ ರಕ್ತವೇ ಹರಿದಿದೆ.‌ ಈ ತಿಂಗಳಲ್ಲಿ ಗುಂಪು ಹತ್ಯೆಯಿಂದ ಅಶ್ರಫ್ ಸಾವನ್ನಪ್ಪಿದ್ರೆ ಕೆಲ ದಿನಗಳಲ್ಲೇ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ನಡೆದಿತ್ತು. ಈ ಆತಂಕದಲ್ಲಿ ಇರೋವಾಗ್ಳೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಪಿಕಪ್ ವಾಹನದಲ್ಲಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಅಬ್ದುಲ್ ರಹ್ಮಾನ್ ಮತ್ತು ಕಲಂದರ್ ಶಾಫಿ ಎಂಬವರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳಿಂದ ಮಾರಣಾಂತಿಕ ದಾಳಿ ನಡೆಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ ರಹ್ಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಕಲಂದರ್ ಶಾಫಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಹತ್ಯೆ ಮತ್ತು ಹತ್ಯೆ ಯತ್ನಕ್ಕೆ ಸಂಬಂಧಿಸಿ ಸ್ಥಳೀಯರಾದ ದೀಪಕ್, ಸಮೀತ್ ಎಂಬ ಇಬ್ಬರು ಸೇರಿ 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ಮಧ್ಯಾಹ್ನ ನಂತರ ‌ಈ‌ ಕೊಲೆ ಕೇಸ್ ಬೆಳಕಿಗೆ ಬಂದ‌‌ ನಂತರ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ಶುಕ್ರವಾರದವರೆಗೆ ನಿಷೇಧಾಜ್ಞೆಯನ್ನು‌ ಹೇರಲಾಯ್ತು. ಈ‌ ಮಧ್ಯೆ ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿಯೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದು ಇಂದು ಮುಂಜಾನೆ ಕುತ್ತಾರ್ ಮದನಿ ನಗರದ ಮಸೀದಿಯಲ್ಲಿ ಮಯ್ಯತ್ ಸ್ನಾನ ನಿರ್ವಹಿಸಲಾಯಿತು. ಮಯ್ಯತ್ ನಮಾಝ್ ಬಳಿಕ ಅಲ್ಲಿಂದ ಪೊಲೀಸ್ ಬಂದೋಬಸ್ತ್ ನಲ್ಲಿ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಕೊಂಡೊಯ್ಯಲಾಯಿತು. ನೂರಾರು ಮಂದಿ ವಾಹನಗಳಲ್ಲಿ ಆಂಬುಲೆನ್ಸ್ ಜೊತೆ ಸಾಗುತ್ತಿದ್ದಾರೆ. ಮೃತದೇಹವು ಕುತ್ತಾರ್ , ತೊಕ್ಕೊಟ್ಟು, ಪಂಪ್ ವೆಲ್ ಮಾರ್ಗವಾಗಿ ಫರಂಗಿಪೇಟೆ ತಲುಪಿದಾಗ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರ ಗುಂಪು ರಸ್ತೆ ತಡೆ ನಡೆಸಿ ಹತ್ಯೆಯನ್ನು ಖಂಡಿಸಿದರು. ಇದೇ ವೇಳೆ ಬಿಸಿರೋಡ್ ಮಿತ್ತಬೈಲ್ ಮಸೀದಿಯಲ್ಲಿ ಕೂಡಾ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಾರೀ ಮಳೆಯನ್ನು‌ ಲೆಕ್ಕಿಸದೇ ಸಾವಿರಾರು ಮಂದಿ ಆಗಮಿಸಿದ್ದರು.

ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಅಬ್ದುಲ್ ರಹ್ಮಾನ್ ಅವರ ದಫನ ಕ್ರಿಯೆಯು ಕುರಿಯಾಳ ಗ್ರಾಮದ ಇರಾಕೋಡಿಯ ಮಸೀದಿಯ ಆವರಣದಲ್ಲಿ ನಡೆಯಿತು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ಅಂತಿಮ ದರ್ಶನ ಪಡೆದರು. ಕುತ್ತಾರ್ ಮದನಿ ನಗರದ ಮಸೀದಿಯಲ್ಲಿ ಪ್ರಾಥಮಿಕ ವಿಧಿ ವಿಧಾನ ಪೂರೈಸಿದ ಬಳಿಕ ಮೃತದೇಹವನ್ನು ಅವರ ಮನೆಗೆ ಕೊಂಡೊಯ್ಯಲಾಯಿತು. ಈ ಸಂದರ್ಭ ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಅಬ್ದುಲ್ ರಹ್ಮಾನ್‌ರ ತಂದೆ, ತಾಯಿ, ಸಹೋದರಿ, ಪತ್ನಿ ಹಾಗೂ ಸಂಬಂಧಿಕರ ಸಹಿತ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು. ಈ ಮಧ್ಯೆ ಈ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಮುಸ್ಲಿಂ ‌ನಾಯಕರು ಕಾನೂನು ವೈಫಲ್ಯವನ್ನು‌ ಖಂಡಿಸಿ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ ‌ನೀಡಿದ್ದಾರೆ.

ಒಟ್ನಲ್ಲಿ ಈ‌ ಹತ್ಯೆ ಹಿಂದೆ ರೀವೆಂಜ್ ಇದ್ಯೋ ಗೊತ್ತಿಲ್ಲ. ಈವರೆಗೂ ಪೊಲೀಸರು ಪ್ರಕರಣ ದಾಖಲಾಗಿದರೂ ಆರೋಪಿಗಳನ್ನು ಬಂಧಿಸಿಲ್ಲ. ಇನ್ನು ಇಷ್ಟು ದೊಡ್ಡ ಅನಾಹುತ ಆದ್ರೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಗೃಹಸಚಿವ ಪರಮೇಶ್ವರ್ ಮಂಗಳೂರಿಗೆ ಭೇಟಿ ನೀಡದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

RELATED ARTICLES
- Advertisment -
Google search engine

Most Popular