ಕೆ ಆರ್ ನಗರ : ಹಲವಾರು ದೇಶಗಳನ್ನು ಸುತ್ತಿ ಆ ದೇಶದ ಸಂವಿಧಾನವನ್ನು ಓದಿ ವಿಶಾಲವಾದ ಭಾರತ ದೇಶಕ್ಕೆ ನಮ್ಮನ್ನು ನಾವೇ ಆಳಿಕೊಳ್ಳುವಂತ ಸಂವಿಧಾನದ ದಿನವನ್ನು ನೀಡಿದ್ದು ಡಾ.ಬಿ.ಆರ್. ಅಂಬೇಡ್ಕರ್ ಅಂತಹ ಮಹನೀಯ ರಚಿಸಿದ ಸಂವಿಧಾನದ ದಿನ ಆಚರಿಸುತ್ತಿರುವುದು ಹೆಮ್ಮೆ ಎಂದು ಶಾಸಕ ಡಿ ರವಿಶಂಕರ್ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪುರಸಭೆಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ವಾಲ್ಮೀಕಿ ನಾಯಕರ ಸಮುದಾಯ ಭವನದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ದೇಶದ ಸಮಸ್ತ ಜನರು ಸಮಾನತೆ ಮತ್ತು ಸ್ವಾಭಿಮಾನದಿಂದ ಬದುಕುವಂತಹ ಸಂವಿಧಾನ ರಚಿಸಿದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆಲ್ಲ ದಾರಿ ದೀಪ ಎಂದು ಹೇಳಿದರು.
ಜಗತ್ತಿನಲ್ಲಿಯೇ ಸದೃಢವಾದ ಸಂವಿಧಾನ ನಮ್ಮದಾಗಿದ್ದು, ಸತತ ಅಧ್ಯಯನದ ಮೂಲಕ ಅದನ್ನು ರಚನೆ ಮಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಮಾಡಿದ ಹೆಗ್ಗಳಿಕೆ ಬಾಬಾ ಸಾಹೇಬರದ್ದು ಎಂದರು.
ರಾಜ್ಯ ಮತ್ತು ದೇಶದಲ್ಲಿ ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದಿಂದ ನಾನು ಶಾಸಕನಾಗಿದ್ದೇನೆ. ಇಲ್ಲಿ ಕುಳಿತಿರುವ ಅಧಿಕಾರಿಗಳು ಸೇರಿದಂತೆ ವಿವಿಧ ಹುದ್ದೆಯಲ್ಲಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳು ಅಧಿಕಾರದಲ್ಲಿದ್ದೇವೆ ಎಂದರೆ ಅವರು ಕೊಟ್ಟಂತಹ ಹಕ್ಕು ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ತಾಲೂಕು ಎಸ್. ಸಿ ಮತ್ತು ಎಸ್. ಟಿ ಸಮಾಜದವರ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿಲ್ಲ ಎಂಬ ದೂರುಗಳಿದ್ದು ಕೂಡಲೇ ಅಧಿಕಾರಿಗಳು ಸಭೆ ನಡೆಸಬೇಕೆಂದು ಸೂಚನೆ ನೀಡಿದರು.
ಉಪನ್ಯಾಸಕ ಪ್ರಭು ಭಾರತ ಸಂವಿದಾನ ಕುರಿತು ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ಆರಂಭಕ್ಕೂ ಮೊದಲು ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಬಳಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಸಂವಿಧಾನ ಶಿಲ್ಪಿಗೆ ಜಯಕಾರದ ಘೋಷಣೆ ಮೊಳಗಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ತಾ.ಪಂ.ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಸದಸ್ಯ ಸೈಯದ್ ಜಾಬೀರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ನಿವೃತ್ತ ಉಪನ್ಯಾಸಕ ಕೃಷ್ಣಯ್ಯ, ದಲಿತ ಮುಖಂಡರಾದ ಹನಸೋಗೆ ನಾಗರಾಜು, ಮಧವನಹಳ್ಳಿ ಎಂ.ಲೋಕೇಶ್, ಶಾಂತಿರಾಜ್, ನಂದೀಶ್, ಗುರು, ಕಗ್ಗೆರೆ ಬಸವರಾಜು, ಚಲುವರಾಜು, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾ.ಪಂ. ಇ.ಒ. ವಿ.ಪಿ.ಕುಲದೀಪ್, ಬಿಇಒ ಆರ್.ಕೃಷ್ಣಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ, ಉಪನ್ಯಾಸಕ ಡಿ.ಶ್ರೀನಿವಾಸ್ ಮತ್ತಿತರರು ಇದ್ದರು.



