ಉಡುಪಿ: ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ಸಂಬಂಧಿತ ಘಟನೆಗಳನ್ನು ನಿಯಂತ್ರಿಸಲು ಸರ್ಕಾರ ರಚಿಸಿರುವ ವಿಶೇಷ ಕಾರ್ಯಪಡೆಗೆ ಉಡುಪಿ ಜಿಲ್ಲೆಯನ್ನು ಕೂಡ ಸೇರಿಸಲಾಗಿದೆ ಎಂಬುದು ಜಿಲ್ಲೆಯ ಹೆಗ್ಗಳಿಕೆಗೆ ಧಕ್ಕೆಯಾಗುತ್ತದೆ ಎಂಬ ರೀತಿಯಲ್ಲಿ ಕೆಲವೊಂದು ವಾದಗಳು ಕೇಳಿಬಂದಿರುವ ಬೆನ್ನಲ್ಲೇ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. “ಈ ತಂಡದ ರಚನೆ ಮುನ್ನೆಚ್ಚರಿಕಾ ಕ್ರಮ ಮಾತ್ರ. ಉಡುಪಿ ಜಿಲ್ಲೆಯನ್ನು ಕೋಮು ಸೂಕ್ಷ್ಮ ಪ್ರದೇಶವೆಂದು ಬಿಂಬಿಸಲು ಇದನ್ನು ಮಾಡಿಲ್ಲ. ಜಿಲ್ಲೆಯ ಘನತೆಗೆ ಇದರಿಂದ ಯಾವುದೇ ಹಾನಿಯಿಲ್ಲ” ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಕೊಲ್ಲೂರಿನಲ್ಲಿ ವಾಸ್ತವ್ಯ ಹೂಡಿದ್ದ ಪರಮೇಶ್ವರ್ ಅವರು, ಶನಿವಾರ ಬೆಳಿಗ್ಗೆ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಉಡುಪಿಗೆ ಆಗಮಿಸಿದ್ದರು. ಅವರು ಹಿಂದುಳಿದ ವರ್ಗದ ಅಭಿವೃದ್ಧಿ ಹಾಗೂ ಶಾಂತಿ ಕಾಪಾಡುವ ಕಾರ್ಯದಲ್ಲಿ ತಮ್ಮ ಭದ್ರತೆ ಮತ್ತು ಗಂಭೀರತೆಯನ್ನು ಒತ್ತಿಹೇಳಿದರು.
ಈ ಪಡೆಯ ಉಪಯೋಗ ಆಗದಿರುವಂತೆ ನೋಡಿಕೊಳ್ಳಿ ಅಂತ ಸಾರ್ವಜನಿಕರಿಗೂ ನಾನು ಮನವಿ ಮಾಡಿದ್ದೇನೆ. ಕೋಮುವಾದಕ್ಕೆ ಸಂಬಂಧಪಟ್ಟ ಘಟನೆ ನಡೆಯದಿದ್ದಲ್ಲಿ ಈ ಕಾರ್ಯಪಡೆ ಅಗತ್ಯ ಬರೋದಿಲ್ಲ. ಅಗತ್ಯ ಇದೆ ಇಲ್ಲ ಅನ್ನೋದನ್ನ ಸಾರ್ವಜನಿಕರೇ ನಿರ್ಧಾರ ಮಾಡಬೇಕು. ಇದರ ಅಗತ್ಯ ಬರದಿದ್ದಲ್ಲಿ ಕೋಮುವಾದ ಸಂಪೂರ್ಣ ಹೋಗಿದೆ ಅಂತ ಅರ್ಥ ಅಲ್ವ ಎಂದವರು ನಗುತ್ತಾ ಪ್ರಶ್ನಿಸಿದರು.
ಇಲ್ಲಿ ಘನತೆಗೆ ಧಕ್ಕೆ ಬರುವ ವಿಚಾರವೇ ಇಲ್ಲ. ನಕ್ಸಲರ ನಿಗ್ರಹಕ್ಕಾಗಿ ಕಾರ್ಕಳ ಭಾಗದಲ್ಲಿ ಎಎನ್ ಎಫ್ ಮುಖ್ಯ ಕಚೇರಿ ಮಾಡಿದ್ದೆವು. ಎಎನ್ಎಫ್ ನಿಂದ ಉಡುಪಿಯ ಘನತೆ ಕಡಿಮೆಯಾಯಿತಾ? ನಕ್ಸಲರಿಂದ ಬಹಳಷ್ಟು ಜನರ ಹತ್ಯೆ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಉಡುಪಿಯಲ್ಲಿ ಎಎನ್ ಎಫ್ ಕಚೇರಿ ಆರಂಭಿಸಿದ್ದೆವು. ಇದರಿಂದ ಉಡುಪಿ ಜನಸಮುದಾಯದ ಘನತೆಗೆ ಧಕ್ಕೆ ಆಗಿಲ್ಲ ಎಂದು ಸಮಜಾಯಿಷಿ ನೀಡಿದ ಗೃಹ ಸಚಿವರು, ಪೊಲೀಸ್ ವ್ಯವಸ್ಥೆ ಇದೆ ಎಂದ ಮಾತ್ರಕ್ಕೆ ಘನತೆಗೆ ಧಕ್ಕೆ ಆಗುತ್ತಾ? ಊರಿಗೆ ಅವಮಾನವಾಗುತ್ತಾ ಎಂದು ಮರು ಪ್ರಶ್ನಿಸಿದರು.
ಕಮಿಷನರ್ ಅವರು ಕಾರ್ಯಪಡೆಯ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ನೋಡಿಕೊಳ್ತಾರೆ. ಐಜಿ ಅವರು ಮೂರು ಜಿಲ್ಲೆಗಳನ್ನು ಮಾನಿಟರ್ ಮಾಡ್ತಾರೆ ಎಂದರು.
ಕೊಲ್ಲೂರು ಭೇಟಿಯ ಕುರಿತು ಗೃಹ ಸಚಿವರನ್ನು ಪ್ರಶ್ನಿಸಿದಾಗ, ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನನ್ನ ವೈಯುಕ್ತಿಕ ವಿಚಾರ. ದೇವಸ್ಥಾನಕ್ಕೆ ಹೋಗೋದು ನಮ್ಮ ಸಂಪ್ರದಾಯ. ಮೂಕಾಂಬಿಕಾ ತಾಯಿಗೆ ನಮಸ್ಕಾರ ಹಾಕಿ ಬಂದಿದ್ದೇನೆ ಅಷ್ಟೆ ಎಂದು ಹೇಳಿದರು.