ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಒಲವು ತೋರಿದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ.ಆದರೆ ಇತ್ತೀಚಿನ ವಿದ್ಯಾರ್ಥಿಗಳು ಕೇವಲ ಮೊಬೈಲ್ ಮತ್ತು ಟಿವಿ ನೋಡುತ್ತಾ ಕಾಲ ಕಳೆಯುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರ್.ನಗರ ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹೊಸೂರು ಕುಚೇಲ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹಳೆಯೂರು ಬಡಾವಣೆಯ ಶ್ರೀ ವಿದ್ಯಾ ಶಿಕ್ಷಣ ಸಂಸ್ಥೆಯ 25ನೇ ಶಾಲಾ ವೈಭವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಶಿಕ್ಷಣದಲ್ಲಿ ಕೇವಲ ಶಿಕ್ಷಕರ ಪಾತ್ರ ಅಷ್ಟೇ ಮುಖ್ಯ ಅಲ್ಲ,ಜತೆಗೆ ಪೋಷಕರ ಜವಾಬ್ದಾರಿ ಬಹಳಷ್ಟಿದ್ದು ಇಲ್ಲಿ ಪೋಷಕರು ಸ್ವಲ್ಪ ಮೈ ಮರೆತರು ಮಕ್ಕಳು ಶಿಕ್ಷಣದಲ್ಲಿ ಎಡವಲಿದ್ದು ಇದಕ್ಕೆ ಅವಕಾಶ ನೀಡಬೇಡಿ ಎಂದರು.
ತಂದ್ರೆ ದಯಾನಂದ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಹೆಚ್.ಎನ್.ನಾರಾಯಣ್ ಅವರು ಮಾತನಾಡಿ, ವಿದೇಶಿ ವ್ಯಾಮೋಹ ಬಿಟ್ಟು ನಮ್ಮ ದೇಶದಲ್ಲೇ ಕಲಿಕೆಯಲ್ಲಿ ತೊಡಗಬೇಕು. ಭಾರತದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಇದ್ದು, ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಪೋಷಕರು ಈ ನಿಟ್ಟಿನಲ್ಲಿ ಚಿಂತಿಸಬೇಕೆಂದು ಕರೆ ನೀಡಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು ಅಲ್ಲದೆ ಶಾಲಾ ಸಿಬ್ಬಂದಿಗೆ ನೆನಪಿನ ಕಾಣಿಕೆ ಕೊಡುಗೆಯಾಗಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಅನಿತಾ ಹೆಚ್.ವಿ.ಶ್ರೀನಾಥ್, ಪತ್ರಕರ್ತ ಕರ್ಪೂರವಳ್ಳಿ ಮಹದೇವ್, ಶ್ರೀ ವಿನಾಯಕ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿ ಕಾವೇರಪ್ಪ, ಶ್ರೀ ಯೋಗನರಸಿಂಹ ಸ್ವಾಮಿ ವಿದ್ಯಾಸಂಸ್ಥೆಯ ಶಿಕ್ಷಕ ಶಿವಶಂಕರ್, ಮುಖಂಡರಾದ ಶಿವಣ್ಣ ಶಿಕ್ಷಕರಾದ ಯಾಸ್ಮಿನ್ ತಾಜ್, ಪ್ರತೀಮ , ಬಿಂದು ,ನೇತ್ರಾವತಿ ಸೇರಿದಂತೆ ಇನ್ನಿತರರು ಇದ್ದರು.



