ಚಾಮರಾಜನಗರ: ರಾಜ್ಯದ ಪ್ರಮುಖ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟ (ಮಾದಪ್ಪನ ಬೆಟ್ಟ)ದಲ್ಲಿ ಇದೀಗ ಗಾಂಜಾ ಮತ್ತು ಮದ್ಯದ ಅಕ್ರಮ ಬಳಕೆಯ ಅಟ್ಟಹಾಸ ಹೆಚ್ಚಾಗಿದ್ದು, ಭಕ್ತರಲ್ಲಿ ಆಕ್ರೋಶ ಮೂಡಿಸಿದೆ. ಮಾದಪ್ಪನ ಸನ್ನಿಧಿಯಲ್ಲಿ ಗಾಂಜಾ ಸೇದುವ ಪ್ರಕರಣಗಳು ಹೆಚ್ಚಾಗುತ್ತಿವೆ. ಬಸ್ ನಿಲ್ದಾಣದ ಹಿಂಭಾಗದ ಖಾಲಿ ಜಾಗ ಗಾಂಜಾ ಸೇವನೆಗೆ ಅಡ್ಡೆಯಾಗಿ ಪರಿವರ್ತನೆಯಾಗಿರುವುದು ಗಂಭೀರ ಚಿಂತೆಯ ವಿಷಯವಾಗಿದೆ.
ಅಕ್ರಮವಾಗಿ ಗಾಂಜಾ ಸೇವಿಸುತ್ತಿರುವ ಯುವಕರು ಯಾವುದೇ ಭಯವಿಲ್ಲದೇ, ಬಯಲಲ್ಲಿ ನಿಶ್ಚಿಂತರಾಗಿ ವರ್ತಿಸುತ್ತಿರುವ ದೃಶ್ಯಗಳು ಕಾಣಿಸುತ್ತಿವೆ. ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದ್ರೂ ಪ್ರಾಧಿಕಾರ, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಯಾವುದೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಮಲೆ ಮಹದೇಶ್ವರ ಬೆಟ್ಟವನ್ನು ಮದ್ಯ ಮುಕ್ತವಾಗಿ ಉಳಿಸಲು ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಖಡಕ್ ಸೂಚನೆ ನೀಡಿದ್ದರು. ಏಪ್ರಿಲ್ 24ರಂದು ನಡೆದ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕೂಡ ಸಿಎಂ ಸಿದ್ದರಾಮಯ್ಯ ಈ ವಿಷಯವನ್ನು ಬಹುಮುಖ್ಯವಾಗಿ ಪ್ರಸ್ತಾಪಿಸಿ, ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಭಕ್ತರ ಆತಂಕದಂತೆ, ಈ ಸೂಚನೆ ಕೇವಲ ಮಾತಿನ ಮಟ್ಟಕ್ಕಷ್ಟೇ ಸೀಮಿತವಾಗಿರುವಂತಾಗಿದೆ.
ಗಾಂಜಾ ಮಾತ್ರವಲ್ಲ, ಬೆಟ್ಟದ ಹಲವೆಡೆ ಮದ್ಯದ ಪೌಚ್ಗಳು ಬಿದ್ದಿರುವುದು ಇದೀಗ ಸಾಮಾನ್ಯ ದೃಶ್ಯವಾಗಿದೆ. “ಮದ್ಯ ಮುಕ್ತ ಬೆಟ್ಟ” ಘೋಷಣೆಯೊಂದಿಗೇ ಸ್ಥಳೀಯರು ನಿರೀಕ್ಷಿಸಿದ್ದ ಶುದ್ಧ ಪರಿಸರದ ಕನಸು ಭಗ್ನವಾಗಿದೆ. ಮದ್ಯದ ಪೌಚ್ಗಳು ಬಸ್ ನಿಲ್ದಾಣ, ರಸ್ತೆಯ ಅಂಚು, ಎಲ್ಲೆಂದರಲ್ಲಿ ಪತ್ತೆಯಾಗುತ್ತಿದ್ದು, ಪ್ರಾಧಿಕಾರದ ವಿಫಲ ನಿರ್ವಹಣೆಗೆ ಸಾಕ್ಷಿಯಾಗಿದೆ.
ಸಾಮಾನ್ಯರ ಪ್ರಕಾರ, ಪ್ರಾಧಿಕಾರದ ಕೆಲವು ಅಧಿಕಾರಿಗಳ ಅನುಮತಿಯೊಂದಿಗೆ ಮದ್ಯ ಸಾಗಾಟ ನಡೆಯುತ್ತಿದ್ದು, ಸ್ಥಳೀಯ ಪಾಲನೆಯ ನಿಷ್ಕ್ರಿಯತೆಯಿಂದಲೇ ಗಾಂಜಾ ವ್ಯಾಪಾರಕ್ಕೂ ಅವಕಾಶ ಸಿಗುತ್ತಿದೆ. ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಬೆಟ್ಟದ ಪಾವಿತ್ರ್ಯ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂಬ ಅಸಮಾಧಾನ ಭಕ್ತರಲ್ಲಿ ಕೇಳಿ ಬರುತ್ತಿದೆ.
ಪ್ರಾಧಿಕಾರ ಪ್ಲಾಸ್ಟಿಕ್ ಮುಕ್ತ ಬೆಟ್ಟವನ್ನು ನಿರ್ಮಿಸಲು ನಿರಂತರ ಪ್ರಯತ್ನದಲ್ಲಿದ್ದರೂ, ಅದರಷ್ಟೆ ಮಹತ್ವದ ಗಾಂಜಾ ಮತ್ತು ಮದ್ಯ ನಿರ್ಮೂಲನೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಜೋರಾಗಿವೆ. ಇದರ ಪರಿಣಾಮವಾಗಿ, ಭಕ್ತರಲ್ಲಿ ನಿರಾಸೆ ಮೂಡಿದ್ದು, “ಪವಿತ್ರ ಕ್ಷೇತ್ರದ ಗೌರವ ಕಾಪಾಡಿ” ಎಂದು ಭಕ್ತರು ಆಗ್ರಹಿಸಿದ್ದಾರೆ.