ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳ ಬಾಲ್ಯದ ಶಿಕ್ಷಣದ ಕಲಿಕೆಯಲ್ಲಿ ಶಿಕ್ಷಕರಷ್ಟೆ ತಾಯಂದಿರ ಪಾತ್ರ ಅಪಾರವಾಗಿರುತ್ತದೆ ಎಂದು ಕೆ.ಆರ್.ನಗರ ತಾಲೂಕು ಸಿಡಿಪಿಓ ಅಣ್ಣಯ್ಯ ಅಭಿಪ್ರಾಯ ಪಟ್ಟರು.
ಕೆ.ಆರ್.ನಗರ ತಾಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ್ ಎಜುಕೇಷನ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಶಾಲಾ ಸಿದ್ಧತಾ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮಹಿಳೆ ಶಿಕ್ಷಣ ಕಲಿತರೇ ತಮ್ಮ ಮಕ್ಕಳ ಶಿಕ್ಷಣ ಭವಿಷ್ಯ ರೂಪಿಸಲು ಶಿಕ್ಷಕರಿಗಿಂತಲು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸ ಬಹುದಾಗಿದ್ದು ಈ ನಿಟ್ಟಿನಲ್ಲಿ ಮಹಿಳೆಯರು ಶಿಕ್ಷಣ ವಂತರಾಗಿ ಎಂದರು.
ಉತ್ತಮ ಶಿಕ್ಷಣ ದೊರೆಯ ಬೇಕೆಂಬ ದೃಷ್ಠಿಯಿಂದ ಅಂಗನವಾಡಿ ಕೇಂದ್ರಗಳ ಜೊತಗೆ ಸರ್ಕಾರಿ ಶಾಲೆಗಳನ್ನು ಪ್ರತಿ ಗ್ರಾಮಗಳಲ್ಲಿ ಆರಂಭಿಸಿ ಅಗತ್ಯ ಮೂಲಭೂತ ಸೌಲಭ್ಯವನ್ನು ಒದಗಿಸಿ ಶಿಕ್ಷಣ ನೀಡುತ್ತಿದ್ದು ಪೋಷಕರು ಖಾಸಗಿ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನ ಸೇರಿಸಿ ಶಾಲೆಗಳ ಉಳಿವಿಗೆ ಮುಂದಾಗಿ ಎಂದರು.
ಪ್ರಥಮ್ ಫೌಂಡೇಷನ್ ಅವರು 2024 – 2025 ನೇ ಸಾಲಿನಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಲಿರುವ ಮಕ್ಕಳ ಶಾಲಾಪೂರ್ವ ತಯಾರಿ ಯಾವ ರೀತಿಯಲ್ಲಿದೆ ಎಂದು ತಿಳಿಯಲು ಕೆಲವು ಕಲಿಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಮೌಲ್ಯಮಾಪನ ಮಾಡಿ ಮಕ್ಕಳ ಕಲಿಕಾ ಮಟ್ಟವನ್ನು ಗುರುತಿಸುವ ಮೂಲಕ ಗ್ರಾಮಾಂತರ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಪ್ರಥಮ್ ಸಂಸ್ಥೆಯ ಸ್ವಯಂ ಸೇವಕರು 1ನೇ ತರಗತಿಗೆ ಸೇರ್ಪಡೆಯಾಗುವ ಮಕ್ಕಳ ತಾಯಂದಿರ ಗುಂಪು ರಚಿಸಿ ಅವರಿಗೆ ಮಕ್ಕಳ ಶಾಲಾಪೂರ್ವ ತಯಾರಿಗಾಗಿ ಅಗತ್ಯ ಚಟುವಟಿಕೆಗಳು ಮತ್ತು ಸಂಬಂಧಿತ ವೀಡಿಯೋಗಳನ್ನು ವಾಟ್ಸಾಪ್ ಮೂಲಕ ಹಂಚಿಕೊಂಡು ತಾಯಂದಿರು ಮಕ್ಕಳ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನ ನೀಡಿದರು ಅಲ್ಲದೇ ಮಕ್ಕಳ ಕೌಶಲ್ಯಕ್ಕೆ ದೈಹಿಕ ಚಲನಾತ್ಮಕ ಕೌಶಲ್ಯ, ಸಾಮಾಜಿಕ ವೈಯಕ್ತಿಕ ಕೌಶಲ್ಯ, ಜ್ಞಾನೇಂದ್ರಿಯ ಗ್ರಹಣ ಶಕ್ತಿ ಕೌಶಲ್ಯ, ಭಾಷಾ ಕೌಶಲ್ಯ, ಸೃಜನಶೀಲ ಕೌಶಲ್ಯ ಸ್ಟಾಲ್ ಗಳನ್ನು ತೆರೆಯಲಾಗಿತ್ತು ಮತ್ತು ಮಕ್ಕಳಿಗೆ ರಿಪೋರ್ಟ್ ಕಾರ್ಡ್ ಕೊಡಲಾಯಿತು ತಾಯಂದಿರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪ್ರಥಮ್ ಸಂಸ್ಥೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಸರಸ್ವತಿ,ಎಂ.ಎಂ.ಇ ಅಶ್ವಿನಿ , ಮಾಸ್ಟರ್ ಟ್ರೈನರ್ಸ್ ನಗೀನ ಬಾನು, ಸುಮಯ್ಯ ಖಾನಂ ರವರು ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕು ಸಿಡಿಪಿಓ ಕಚೇರಿಯ ಉಪ ಯೋಜನಾಧಿಕಾರಿ, ಅಕ್ಕಮಹಾದೇವಿ, ಮೇಲ್ವಿಚಾರಕಿ ಮಂಜುಳಾ, ಅಂಗನವಾಡಿ ಶಿಕ್ಷಕಿಯರಾದ ಪಂಕಜ್, ಮಂಗಳ, ಮಾರಗೌಡನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸಯ್ಯದ್ ರಿಜ್ವಾನ್, ಶಿಕ್ಷಕ ಸ್ವಾಮಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪ್ರಸಾದ್ , ಪಿಡಿಓ ರವಿಕುಮಾರ್ ಸೇರಿದಂತೆ ಮತ್ತಿತರರು.