ಮದ್ದೂರು : ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಬಹುಮುಖ್ಯವಾಗಿದ್ದು ಪೋಷಕರು ತಮ್ಮ ನಡವಳಿಕೆ ಮತ್ತು ಮೌಲ್ಯಗಳ ಮೂಲಕ ಆದರ್ಶವಾಗಿದ್ದಾಗ ಮಾತ್ರ ಮಕ್ಕಳ ಶೈಕ್ಷಣಿಕ ಯಶಸ್ವಿಗೆ ಉತ್ತಮ ಅಡಿಪಾಯವಾಗುತ್ತದೆ ಎಂದು ಮಂಡ್ಯ ಪ್ರಾಂತ ಅಲಯನ್ಸ್ ಕ್ಲಬ್ ನ ಹಿರಿಯ ರಾಜ್ಯಪಾಲ ಕೆ.ಟಿ. ಹನುಮಂತು ಹೇಳಿದರು.
ಈ ಬಗ್ಗೆ ನಗರದ ಡಾ.ಹೆಚ್.ಕೆ ಮರಿಯಪ್ಪ ಕಾನ್ವೆಂಟ್ ಹಾಗೂ ಡಾ.ಶಾಂತ ಮರಿಯಪ್ಪ ಪಬ್ಲಿಕ್ ಹೈಸ್ಕೂಲ್ ನಲ್ಲಿ ಆಯೋಜಿಸಿಲಾಗಿದ್ದ ಪೋಷಕರ ಕ್ರೀಡಾಕೂಟ ಮತ್ತು ಬಹುಮಾನ ವಿತರಣೆ ಹಾಗೂ ವಾರ್ಷಿಕ ದಿನಚರಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು,
ಪೋಷಕರು ಮಕ್ಕಳ ಆಸಕ್ತಿ ಅಭಿರುಚಿ ಸಾಮರ್ಥ್ಯಗಳಿಗೆ ಬೆಂಬಲವಾಗಿ ನಿರಂತರ ಸಕಾರಾತ್ಮಕ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸುವುದು ಅನಿವಾರ್ಯ ಎಂದರು.
ಅಲ್ಲದೆ ಇಂದಿನ ಒತ್ತಡ ಜೀವನದಲ್ಲಿ ಪೋಷಕರು ಮಕ್ಕಳ ಎಲ್ಲಾ ಜವಾಬ್ದಾರಿಯು ಶಾಲೆ ಮತ್ತು ಶಿಕ್ಷಕರದ್ದಾಗಿದೆ ಎಂದು ತಿಳಿದುಕೊಳ್ಳುವುದು ಸರಿಯಲ್ಲ ಎಂದು ಕಿವಿಮಾತು ನೀಡಿದರು. ಇನ್ನೂ ಪೋಷಕರು ಶಾಲೆ ಮತ್ತು ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಶಾಲೆಯಲ್ಲಿ ನಡೆಯುವ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾದಾಗ ಮಾತ್ರ ತಮ್ಮ ಮಗುವಿನ ಶೈಕ್ಷಣಿಕ ಜೀವನ ಯಶಸ್ಸಾಗಿ ಸಾಮಾಜಿಕ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಹೆಚ್ .ಚನ್ನೇಗೌಡ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಿರುವುದರಿಂದ ಪೋಷಕರು ಮನೆಯಲ್ಲಿ ಪ್ರೀತಿ ಮತ್ತು ಸಂತೋಷದ ವಾತಾವರಣವನ್ನು ಸೃಷ್ಟಿಸುವುದರಿಂದ ಮಕ್ಕಳ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಮತ್ತು ಕಲಿಕೆಗೆ ಪ್ರೇರಣೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬಳಿಕ ತಾಲೂಕು ಕಸಪ ಅಧ್ಯಕ್ಷ ಕೆ. ಎಸ್. ಸುನಿಲ್ ಕುಮಾರ್ ಪೋಷಕರಗಳಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತ ಪೋಷಕರುಗಳಿಗೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಇನ್ನರ್ವಿಲ್ ಮಾಜಿ ಅಧ್ಯಕ್ಷ ಚಂದ್ರಕಲಾ, ಮಂಡ್ಯ ಲಯನ್ಸ್ ರಾಯಲ್ಸ್ ನಿರ್ದೇಶಕಿ ಕವಿತಾ ಅಪೂರ್ವಚಂದ್ರ, ಸದಸ್ಯೆ ಸೌಮ್ಯ ಉಮೇಶ್, ಕಲ್ಪವೃಕ್ಷ ಪತ್ತಿನ ಸಹಕಾರ ಸಂಘದ ಸದಸ್ಯರಾದ ಕಲಾವತಿ ಪ್ರಸನ್ನ, ಸುಷ್ಮಾ ಯೋಗೇಶ್, ಪ್ರಾಂಶುಪಾಲ ಯು.ಎಸ್. ಶಿವಕುಮಾರ್, ಆಡಳಿತಾಧಿಕಾರಿ ಯು.ಎಸ್. ರವಿ, ಮುಖ್ಯ ಶಿಕ್ಷಕ ವರದರಾಜ್, ಸುಗಮ ಸಂಗೀತ ಗಾಯಕ ಡೇವಿಡ್ ಸೇರಿದಂತೆ ಇತರರು ಹಾಜರಿದ್ದರು.



