ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಗೆ ‘ಧರ್ಮ ಚಕ್ರವರ್ತಿ’ ಎಂಬ ಗೌರವಾನ್ವಿತ ಬಿರುದನ್ನು ಜೈನ ಧರ್ಮಗುರು ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವದ ವೇಳೆ ಪ್ರದಾನ ಮಾಡಲಾಯಿತು. ಧರ್ಮದ ಪ್ರಚಾರ ಹಾಗೂ ಸನಾತನ ಸಂಸ್ಕೃತಿಯ ರಕ್ಷಣೆಗೆ ಪ್ರಧಾನಿಯವರು ಸಲ್ಲಿಸಿರುವ ಸೇವೆಯನ್ನು ಗೌರವಿಸಲು ಈ ಬಿರುದು ನೀಡಲಾಯಿತು.
ಜೈನ ಸಮುದಾಯದ ನೂರಾರು ಸಂತರು, ಭಕ್ತರು ಹಾಗೂ ಗಣ್ಯರು ಉಪಸ್ಥಿತರಾದ ಈ ಶತಮಾನೋತ್ಸವ ಸಮಾರಂಭದಲ್ಲಿ, ಪ್ರಧಾನಿಗೆ ಈ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ನೀಡಲಾಯಿತು. ಶತಮಾನೋತ್ಸವದ ಗೌರವದ ಭಾಗವಾಗಿ, ಪ್ರಧಾನಿ ಮೋದಿ ಮತ್ತು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜ್ ಅವರನ್ನು ಗೌರವಿಸುವ ಸ್ಮರಣಾರ್ಥ ಅಂಚೆ ಚೀಟಿಗಳ ಸರಣಿಯನ್ನು ಬಿಡುಗಡೆ ಮಾಡಿದರು.
ಪ್ರಧಾನಿ ಮೋದಿ ಈ ಬಿರುದನ್ನು ಗೌರವದಿಂದ ಸ್ವೀಕರಿಸಿ, “ನಾನು ಈ ಬಿರುದಿಗೆ ಅರ್ಹನೆಂದು ಭಾವಿಸುವುದಿಲ್ಲ. ಆದರೆ ನಮ್ಮ ಸಂಸ್ಕೃತಿಯಲ್ಲಿ ಸಂತರಿಂದ ದೊರೆಯುವ ಯಾವುದನ್ನು ‘ಪ್ರಸಾದ’ವೆಂದು ಸ್ವೀಕರಿಸುತ್ತೇವೆ. ಅದೇ ಮನೋಭಾವದಿಂದ ನಾನು ಈ ಗೌರವವನ್ನು ಭಾರತ ಮಾತೆಗೆ ಅರ್ಪಿಸುತ್ತೇನೆ” ಎಂದು ಹೇಳಿಕೆ ನೀಡಿದರು.
ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಪ್ರಧಾನಿ ಮೋದಿ ಅವರು 1987ರ ಜೂನ್ 28 ರಂದು ಆಚಾರ್ಯ ವಿದ್ಯಾನಂದರಿಗೆ ‘ಆಚಾರ್ಯ’ ಎಂಬ ಬಿರುದು ದೊರೆತಿತ್ತು ಎಂದು ಹೇಳಿದರು. ಇದು ಕೇವಲ ಗೌರವವಲ್ಲ, ಬದಲಾಗಿ ಜೈನ ಸಂಸ್ಕೃತಿಯನ್ನು ಸಂಯಮ ಮತ್ತು ಕರುಣೆಗೆ ಸಂಪರ್ಕಿಸುವ ಪವಿತ್ರ ಧಾರ ಎಂದು ಅವರು ಹೇಳಿದರು. ಈ ಆಚರಣೆಗಳು ಶಿಸ್ತುಬದ್ಧ, ತಪಸ್ವಿ ಜೀವನದ ಜ್ಞಾಪನೆ ಎಂದು ಬಣ್ಣಿಸುತ್ತಾ ಪ್ರಧಾನಿ ಆಚಾರ್ಯರಿಗೆ ಗೌರವ ಸಲ್ಲಿಸಿದರು.
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತಾ ಭಾರತವು ವಿಶ್ವದ ಅತ್ಯಂತ ಹಳೆಯ ಜೀವಂತ ಸಂಸ್ಕೃತಿಯಾಗಿದೆ. ನಮ್ಮ ವಿಚಾರಗಳು, ಆಲೋಚನೆಗಳು ಮತ್ತು ತತ್ವಶಾಸ್ತ್ರವು ಅಮರವಾಗಿರುವುದರಿಂದ ನಾವು ಸಾವಿರಾರು ವರ್ಷಗಳಿಂದ ಅಮರರಾಗಿದ್ದೇವೆ ಎಂದರು.