ಬೆಂಗಳೂರು : ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಲೂಟಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಬಿಜೆಪಿ ಹಾಗೂ ಟ್ರಸ್ಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ “ಚಪ್ಪಲಿ ಕಳ್ಳರಿದ್ದಾರೆ ಎಚ್ಚರಿಕೆ” ಎಂಬ ಬೋರ್ಡ್ಗಳನ್ನು ಕಾಣಬಹುದು. ಆದರೆ ಅಯೋಧ್ಯೆ ಪ್ರಕರಣವನ್ನು ನೋಡಿದರೆ ಇನ್ಮುಂದೆ “ಹುಂಡಿ ಕಳ್ಳರಿದ್ದಾರೆ ಎಚ್ಚರಿಕೆ” ಎಂಬ ಬೋರ್ಡ್ ಹಾಕಬೇಕಾದ ಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಮನ ಹೆಸರಿನಲ್ಲಿ ಹಣ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಇಷ್ಟು ದೊಡ್ಡ ಹಗರಣ ನಡೆದಿದ್ದರೂ ಸರ್ಕಾರ ಇನ್ನೂ ಕಠಿಣ ಕ್ರಮ ಕೈಗೊಂಡಿಲ್ಲ ಹಾಗೂ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಪ್ರಶ್ನಿಸಿದರು. ಸುಮಾರು ₹200 ಕೋಟಿ ದೇಣಿಗೆ ಹಣ ಎಲ್ಲಿಗೆ ಹೋಗಿದೆ? ಈ ಲೂಟಿ ಹೊಡೆದ ಹಣದಲ್ಲಿ ಕರ್ನಾಟಕದವರಿಗೂ ಸಹ ಪಾಲು ಬಂದಿದೆ ಎಂದು ಆರೋಪಿಸಿದರು.
ಈ ಹಣದ ಲೂಟಿಯಲ್ಲಿ ಕರ್ನಾಟಕದವರಿಗೂ ಪಾಲು ಇರುವ ಸಾಧ್ಯತೆ ಇದೆ ಎಂಬ ಗಂಭೀರ ಆರೋಪವನ್ನೂ ಮುಂದಿಟ್ಟರು. ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರದ ಎಸ್ಐಟಿ ಕೈಗೆತ್ತಿಕೊಂಡಿದ್ದರೂ ಅದು ಕೇವಲ ಕಣ್ಣೊರೆಸುವ ಕ್ರಮವಾಗಿದ್ದು, ಪ್ರಕರಣದಲ್ಲಿ ವಾಷಿಂಗ್ ಮಷೀನ್ ರಾಜಕಾರಣ ನಡೆಯಬಾರದು ಎಂದು ಹರಿಪ್ರಸಾದ್ ಹೇಳಿದರು. ತಪ್ಪಿತಸ್ಥರೆಲ್ಲರನ್ನೂ ಕಾನೂನಿನ ಮುಂದೆ ತರಬೇಕು ಮತ್ತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಯಾವುದೇ ಸಂಸ್ಥೆ ಸಂವಿಧಾನದ ಚೌಕಟ್ಟಿನಲ್ಲಿ ನೋಂದಾಯಿತವಾಗಿರಬೇಕು ಎಂಬ ಅಗತ್ಯವನ್ನು ಒತ್ತಿಹೇಳಿದ ಅವರು, ದೇಶಾದ್ಯಂತ ನೋಂದಣಿಯಾಗದ ಸಂಸ್ಥೆಗಳ ಚಟುವಟಿಕೆಗಳ ಕುರಿತು ಪರೋಕ್ಷವಾಗಿ ಟೀಕಿಸಿದರು.



