ಮಂಗಳೂರು(ದಕ್ಷಿಣ ಕನ್ನಡ): ಧಾರ್ಮಿಕ ಕೇಂದ್ರದ ಕಾಣಿಕೆ ಹುಂಡಿಯನ್ನು ಒಡೆದು ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಯುವಕರನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತ್ವಾಹಿದ್ (19), ಉಮ್ಮರ್ ಫಾರೂಕ್ (18), ನಬೀಲ್( 18) ಎಂದು ಗುರುತಿಸಲಾಗಿದೆ.

ಕನ್ಯಾನ ಗ್ರಾಮದ ದೇಲಂತಬೆಟ್ಟು ನಿವಾಸಿ ಡಿ.ನಾರಾಯಣ ರಾವ್ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾರಾಯಣ ಅವರು ಅಧ್ಯಕ್ಷರಾಗಿದ್ದ ಧಾರ್ಮಿಕ ಶ್ರಧ್ದಾ ಕೇಂದ್ರಕ್ಕೆ ಸಂಬಂಧಿಸಿದ ಕಾಣಿಕೆ ಕಟ್ಟೆಯನ್ನು ಕನ್ಯಾನ ಗ್ರಾಮದ ದೇಲಂತ ಬೆಟ್ಟು ಶಾಲಾ ಪಕ್ಕದ ರಸ್ತೆಯ ಬದಿಯಲ್ಲಿ ಹಾಗೂ ದೇಲಂತಬೆಟ್ಟು ಚರ್ಚಿನ ಕೆಳಗಡೆ ರಸ್ತೆಯ ಬದಿಯಲ್ಲಿ ಅಳವಡಿಸಿದ್ದರು. ಕಾಣಿಕೆ ಕಟ್ಟೆಗಳಲ್ಲಿ ಸಂಗ್ರಹವಾಗುವ ಹಣವನ್ನು ತೆಗೆಯಲು ಜುಲೈ 26 ರಂದು ಸ್ಥಳಗಳಿಗೆ ತೆರಳಿದಾಗ, ಎರಡೂ ಕಾಣಿಕೆ ಕಟ್ಟೆಗಳ ಬೀಗವನ್ನು ಒಡೆದು ಸುಮಾರು 12,000/- ರೂ ನಿಂದ 15,000/-ರೂ ಹಣವನ್ನು ಕಳವು ಮಾಡಿರುವುದು ಕಂಡುಬಂದಿರುತ್ತದೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.