ಮಂಗಳೂರು (ದಕ್ಷಿಣ ಕನ್ನಡ): ಮೂರು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗುತ್ತೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅದು ತಿರುಕನ ಕನಸು, ಜನ ಅವರನ್ನು ಮನೆಗೆ ಕಳುಹಿಸಿದ್ದಾರೆ. ನಮ್ಮ ಪಕ್ಷ ಸುಭದ್ರವಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅವರ ಪಕ್ಷದಲ್ಲಿ ಏನು ಸರಿ ಇದೆ? ನಮ್ಮ ಬಟ್ಟಲಲ್ಲಿ ಸೊಳ್ಳೆ ಇದ್ರೆ ಅವರ ಬಟ್ಟಲಲ್ಲಿ ಹೆಗ್ಗಣ ಇದೆ. ಅವರನ್ನು ಅವರು ಉಳಿಸುವುದನ್ನು ನೋಡಿಕೊಳ್ಳಲಿ ಎಂದರು.
ಸುರ್ಜೆವಾಲ ಅವರು ರಾಜ್ಯದ ಎಲ್ಲಾ ಶಾಸಕರನ್ನು ಭೇಟಿಯಾಗಲಿದ್ದಾರೆ. ಅವರಲ್ಲಿರುವ ಅಭಿಪ್ರಾಯಗಳನ್ನು ಸಂಗ್ರಹಿಸಿ ನಂತರ ಮುಂದಿನ ಕ್ರಮ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ರಾಜಕೀಯದಲ್ಲಿ ಅತ್ಯಂತ ದೊಡ್ಡ ಪಕ್ಷ ಹಲವರ ಅಭಿಪ್ರಾಯಗಳು ಬೇರೆ ಬೇರೆಯಾಗಿರುತ್ತವೆ. ನಾನು ಅವರನ್ನು ಭೇಟಿಯಾಗುತ್ತೇನೆ, ನಮ್ಮ ಆಂತರಿಕ ಸಮಸ್ಯೆ ನಮ್ಮಲ್ಲೇ ಬಗೆಹರಿಸುತ್ತೇವೆ ಎಂದು ಹೇಳಿದರು.