ಕಾರವಾರ: ಕಾಂಗ್ರೆಸ್ ದೇಶದಲ್ಲಿ ಅವಾಂತರಗಳನ್ನೇ ಸೃಷ್ಟಿಸಿದೆ. ನಾನಿರುವವರೆಗೆ ಆ ಪಕ್ಷಕ್ಕೆ ನೆಮ್ಮದಿ ನೀಡುವುದಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. ಪ್ರಧಾನಿ ನರೇಂದ್ರ ಮೋದಿಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಆನೆ, ಕುರಿಗೆ ಇರುವಷ್ಟು ವ್ಯತ್ಯಾಸ ಇದೆ. ಮೋದಿ ಅವರಿಗೆ ರಾಹುಲ್ ಗಾಂಧಿ ಪ್ರತಿಸ್ಪರ್ಧಿ ಎಂಬುದೇ ದೊಡ್ಡ ಕಾಮಿಡಿ ಎಂದು ಟೀಕಿಸಿದರು.
ನೈತಿಕವಾಗಿ ಕಾಂಗ್ರೆಸ್ ಬೆಲೆ ಕಳೆದುಕೊಂಡಿದೆ. ಸಂಘಟನಾತ್ಮಕವಾಗಿ ಸೊರಗಿದೆ. ಅಭ್ಯರ್ಥಿಯಾಗಲು ಆ ಪಕ್ಷದಲ್ಲಿ ನಾಯಕರು ಮುಂದೆ ಬರುತ್ತಿಲ್ಲ. ಹೈಕಮಾಂಡ್ ಕೇಳಿದರೆ ನಾಯಕರು ಕರಿಮಣಿ ಮಾಲೀಕ ನಾನಲ್ಲ ಎನ್ನುತ್ತಿದ್ದಾರೆ ಎಂದೂ ಲೇವಡಿ ಮಾಡಿದರು. ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಪ್ರಚಾರಕ್ಕೆ ಬಂದಿದ್ದರೆ ಪಕ್ಷ ಇನ್ನಷ್ಟು ಸ್ಥಾನದಲ್ಲಿ ಗೆಲುವು ಸಾಧಿಸುತ್ತಿತ್ತು ಎಂದು ಪರೋಕ್ಷವಾಗಿ ಅಸಮಾಧಾನ ತೋಡಿಕೊಂಡರು.