ತುಮಕೂರು: ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು ಮುಂದುವರಿದಿದೆ. ಇಂದು ತುಮಕೂರಿನ ಹೊರವಲಯದ ಗೂಳರಿವೆ ಬಳಿಯಿರುವ ಸುಣ್ಣಕಲ್ಲು ಕಟ್ಟೆ ಎಂಬ ಪ್ರದೇಶದಲ್ಲಿ ಮತ್ತೆ ಎರಡು ನವಿಲುಗಳ ಕಳೇಬರ ಪತ್ತೆಯಾಗಿವೆ. ಕಳೆದ 15 ದಿನಗಳ ಹಿಂದೆಯಷ್ಟೇ ಜಿಲ್ಲೆಯ ವಿವಿಧ ಭಾಗಗಳಲ್ಲಿ 44 ನವಿಲುಗಳು ಸಾವನ್ನಪ್ಪಿದ್ದವು.
ಕಳೆದ ತಿಂಗಳು ಜಿಲ್ಲೆಯ ವಿವಿಧೆಡೆ ನವಿಲುಗಳ ಸಾವು ಕಂಡುಬಂದಿತ್ತು. ಏಪ್ರಿಲ್ 16ರಿಂದ 21ರ ಅವಧಿಯಲ್ಲಿ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಹಾಗೂ ಹುಲ್ಲೆನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸುಮಾರು 32 ನವಿಲುಗಳು ಸಾವನ್ನಪ್ಪಿದ್ದವು. ಈ ಸಾವುಗಳಿಗೆ ಹೀಟ್ ಸ್ಟ್ರೋಕ್ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಈ ಹಿಂದೆ ಮೃತಪಟ್ಟ ನವಿಲುಗಳ ಅಂಗಾಂಶಗಳನ್ನು ಪರೀಕ್ಷೆಗಾಗಿ ರವಾನಿಸಲಾಗಿತ್ತು, ಅವುಗಳಿಗೆ ಹೆಚ್5ಎನ್1 ಸೋಂಕು (ಹಕ್ಕಿಜ್ವರ) ತಗುಲಿರುವುದು ದೃಢಪಟ್ಟಿತ್ತು. ಇದೀಗ ಮತ್ತೆ ನವಿಲುಗಳು ಸಾವನ್ನಪ್ಪುತ್ತಿವೆ.
ಸುಣ್ಣಕಲ್ಲು ಕಟ್ಟೆಯಲ್ಲಿ ಪತ್ತೆಯಾದ ನವಿಲುಗಳ ಸಾವಿನ ನಿಖರ ಕಾರಣ ತಿಳಿಯಲು ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ



