ಚಾಮರಾಜನಗರ : ರಸ್ತೆ ಕಾಮಗಾರಿಯ ವೇಳೆ ನಡೆಸಲಾಗಿದೆ ಎನ್ನಲಾದ ಟೆಂಡರ್ ಉಲ್ಲಂಘನೆ ಹಾಗೂ ಕರ್ತವ್ಯ ಲೋಪ ಆರೋಪದಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.
ಹಿಂದಿನ ಎಇಇ ಪುರುಷೋತ್ತಮ (ಪ್ರಸ್ತುತ ಆನೇಕಲ್ ಉಪ ವಿಭಾಗ), ಪ್ರಸ್ತುತ ಕೊಳ್ಳೇಗಾಲ ಉಪ ವಿಭಾಗದ ಎನ್.ಸುರೇಂದ್ರ ಕುಮಾರ್ ಅಮಾನತುಗೊಂಡವರಾಗಿದ್ದಾರೆ.
ಇವರು ಟೆಂಡರ್ ನಿಯಮ ಉಲ್ಲಂಘನೆ, ಗುಣಮಟ್ಟ ಪರೀಕ್ಷೆ ನಡೆಸದೆ, ಅಳತೆಗಳಲ್ಲಿ ವ್ಯತ್ಯಾಸವಿದ್ದರೂ 88.83 ಲಕ್ಷ ಮೊತ್ತದ ಬಿಲ್ ಪಾವತಿ ಮಾಡಿದ್ದರು ಎನ್ನಲಾಗಿದೆ. ಆರ್ಥಿಕ ನಷ್ಟ ಉಂಟು ಮಾಡಿದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಹನೂರು ತಾಲೂಕಿನ ಕೊರಮನಕತ್ರಿ, ಟಿಬೇಟಿಯನ್ ಸೆಟಲ್ಮೆಂಟ್ ಮಾರ್ಗದ 4.20ಕಿ.ಮೀ ರಸ್ತೆ. ಪೂರ್ವಾನುಮೋದನೆಯಿಲ್ಲದೇ ಟೆಂಡರ್ ಆಹ್ವಾನಿಸಿ ಅಂಗೀಕಾರ ಮಾಡಲಾಗಿತ್ತು. ಗುಣಮಟ್ಟ ಪರೀಕ್ಷೆ ನಡೆಸಿರಲಿಲ್ಲ. ಅಳತೆ ಪುಸ್ತಕ ಹಾಗೂ ಕಾಮಗಾರಿಗಳಲ್ಲಿ ವ್ಯತ್ಯಾಸವಾಗಿತ್ತು. ಚಾಲ್ತಿ ಬಿಲ್ ಮೂಲಕ 88.83 ಲಕ್ಷ ರೂ. ಪಾವತಿ ಮಾಡಲಾಗಿತ್ತು ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.



