ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಹಾಗೂ ಮೂರು ಮರಿಗಳು ಅಸಹಜವಾಗಿ ಸಾವಿಗೀಡಾಗಿರುವ ಬಗ್ಗೆ ಪರಿಸರ ಸಚಿವ ಈಶ್ವರ ಖಂಡ್ರೆ ತೀವ್ರ ಆತಂಕ ವ್ಯಕ್ತಪಡಿಸಿ, ಈ ಪ್ರಕರಣದ ತನಿಖೆಗೆ ಪಿಸಿಸಿಸಿಎಫ್ (ಅಥವಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ) ನೇತೃತ್ವದ ತಂಡವನ್ನು ನೇಮಿಸುವಂತೆ ಆದೇಶ ನೀಡಿದ್ದಾರೆ.

ಈ ಕುರಿತು ಅವರು ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಸೂಚನೆ ನೀಡಿದ್ದು, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಅಳಿವಿನಂಚಿನಲ್ಲಿರುವ ಹುಲಿಗಳನ್ನು ರಕ್ಷಿಸಲು ಇಂದಿರಾ ಗಾಂಧಿ ಆರಂಭಿಸಿದ ಹುಲಿ ಯೋಜನೆ ತರುವಾಯ ಕರ್ನಾಟಕವೂ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದೀಗ 563 ಹುಲಿಗಳೊಂದಿಗೆ ರಾಜ್ಯವು ರಾಷ್ಟ್ರಮಟ್ಟದಲ್ಲಿ 2ನೇ ಸ್ಥಾನದಲ್ಲಿದೆ.
ಹುಲಿ ಸಂರಕ್ಷಣೆಗೆ ಮಾದರಿಯಾಗಿರುವ ರಾಜ್ಯದಲ್ಲಿ ಒಂದೇ ದಿನ 4 ಹುಲಿಗಳು ಅಸಹಜವಾಗಿ ಮೃತಪಟ್ಟಿರುವುದು ನೋವು ತರುವ ಸಂಗತಿಯಾಗಿದೆ ಎಂದು ಸಚಿವ ಖಂಡ್ರೆ ವಿಷಾದ ವ್ಯಕ್ತಪಡಿಸಿದ್ದಾರೆ.