ಬೆಂಗಳೂರು: ಸರ್ಕಾರದ ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂಬ ಮಹತ್ವದ ಆದೇಶವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ 1963ರಂತೆ, ಕನ್ನಡವೇ ರಾಜ್ಯದ ಆಡಳಿತ ಭಾಷೆಯಾಗಬೇಕು. ಕನ್ನಡದಲ್ಲಿ ಬರುವ ಅರ್ಜಿ ಹಾಗೂ ಪತ್ರಗಳಿಗೆ ಕನ್ನಡದಲ್ಲಿಯೇ ಉತ್ತರಿಸಬೇಕು. ಸರ್ಕಾರಿ ಕಚೇರಿಗಳ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಎಂದು ಈ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ವಿಧಾನಮಂಡಲದ ಕಾರ್ಯಚಟುವಟಿಕೆಗಳು, ನೇಮಕಾತಿ, ವರ್ಗಾವಣೆ, ರಜೆ ಮಂಜೂರಾತಿ ಸೇರಿದಂತೆ ಎಲ್ಲಾ ಅಧಿಕೃತ ಆದೇಶಗಳು ಕನ್ನಡದಲ್ಲಿಯೇ ಹೊರಡಿಸಬೇಕು. ಕಚೇರಿಗಳಲ್ಲಿ ಆಂಗ್ಲ ನಮೂನೆ ಅಥವಾ ದಾಖಲೆ ಪುಸ್ತಕಗಳನ್ನು ಕೂಡ ಕನ್ನಡದಲ್ಲಿ ಭರ್ತಿ ಮಾಡಬೇಕು.
ಆಂತರಿಕ ಪತ್ರ ವ್ಯವಹಾರ, ಕಡತದ ಟಿಪ್ಪಣಿಗಳು, ಸಭಾ ಸೂಚನೆಗಳು, ಕಾರ್ಯಸೂಚಿ, ಸಂಕ್ಷಿಪ್ತ ಟಿಪ್ಪಣಿ, ನಡಾವಳಿಗಳು ಎಲ್ಲಾ ಕನ್ನಡದಲ್ಲಿಯೇ ಇರಬೇಕೆಂದು ಸೂಚಿಸಲಾಗಿದೆ.
ಕೇಂದ್ರ ಸರ್ಕಾರ, ಹೊರರಾಜ್ಯಗಳು ಹಾಗೂ ನ್ಯಾಯಾಂಗ ಪತ್ರ ವ್ಯವಹಾರಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಪತ್ರ ವ್ಯವಹಾರಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಿದೆ.
ಸಿಎಂ ಸಿದ್ದರಾಮಯ್ಯ ಈ ವಿಷಯದಲ್ಲಿ ಗಂಭೀರವಾಗಿ ಗಮನ ಹರಿಸಿದ್ದು, ಕನ್ನಡದಲ್ಲಿ ಟಿಪ್ಪಣಿ ಬರದಿದ್ದರೆ ಅಂತಹ ಕಡತಗಳನ್ನು ಹಿಂದಿರುಗಿಸಿ ಸಮಜಾಯಿಷಿ ಪಡೆಯಬೇಕು ಎಂದು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಉಲ್ಲಂಘನೆ ಮಾಡಿದವರ ವಿರುದ್ಧ ವೈಯಕ್ತಿಕ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.