ಲಕ್ನೋ: ಒಂದು ಕಾಲದಲ್ಲಿ ಉತ್ತರ ಪ್ರದೇಶದ ಪ್ರಬಲ ಪಕ್ಷವಾಗಿದ್ದ ಬಹುಜನ ಸಮಾಜವಾದಿ ಪಕ್ಷ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಹೇಳ ಹೆಸರಿಲ್ಲದಂತಾಗಿದೆ.
ಎಷ್ಟೆಂದರೆ, ಯುಪಿಯಲ್ಲಿ ಸ್ಪರ್ಧೆ ಮಾಡಿದ್ದ ೭೯ ಕ್ಷೇತ್ರಗಳಲ್ಲಿಯೂ ಮಕಾಡೆ ಮಲಗಿದೆ. ದೇಶಾದ್ಯಂತ ೪೨೪ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಒಂದರಲ್ಲೂ ಮುನ್ನಡೆ ಸಾಧಿಸಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ೩೩, ಸಮಾಜವಾದಿ ಪಕ್ಷ ೩೭, ಕಾಂಗ್ರೆಸ್ ೬ , ಆರ್ಎಲ್ಡಿ ೨ ಹಾಗೂ ಇತರರು ೨ ಕ್ಷೇತ್ರಗಳಲ್ಲಿ ಗೆಲುವು ದಕ್ಕಿಸಿಕೊಂಡಿವೆ. ಒಂದೂ ಸ್ಥಾನವನ್ನು ಗೆಲ್ಲದ ಕಾರಣ ಬಿಎಸ್ಪಿ ಯುಗ ಅಂತ್ಯವಾಯಿತು ಎನ್ನಲಾಗುತ್ತಿದೆ. ಖುಷಿಯ ವಿಚಾರವೆಂದರೆ ಆ ಸ್ಥಾನಕ್ಕೆ ಮತ್ತೊಬ್ಬ ದಲಿತ ನಾಯಕ ಆಗಮಿಸಿದ್ದಾರೆ. ಯಾವುದೇ ಪಕ್ಷದ ಬೆಂಬಲ ಪಡೆಯದೇ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಯುಪಿಯಲ್ಲಿ ಮಾಯಾವತಿ ಯುಗಾಂತ್ಯವಾಗಿದೆಯೆಂದು ವಿಶ್ಲೇಷಿಸಲಾಗಿದೆ.
ಮತ್ತೊಂದೆಡೆ, ಆಜಾದ್ ಸಮಾಜ ಪಕ್ಷದ (ಕಾನ್ಶಿ ರಾಮ್) ಚಂದ್ರಶೇಖರ್ ಆಜಾದ್ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರ ಬೆಂಬಲವಿಲ್ಲದೆ ನಾಗಿನಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಅವರು ಹೊಸ ದಲಿತ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.