ಬೆಂಗಳೂರು: ರಾಜ್ಯ ಮುಖ್ಯಚುನಾವಣಾಧಿಕಾರಿ (ಸಿಇಒ)ಯಾಗಿ ಹಿರಿಯ ಐಎಎಸ್ ಅಧಿಕಾರಿ ವಿ.ಅನ್ಬುಕುಮಾರ್ ಅವರನ್ನು ಕೇಂದ್ರ ಚುನಾವಣ ಆಯೋಗ ನೇಮಕ ಮಾಡಿದ್ದು, ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅನುಕೂಲವಾಗುವಂತೆ ರಾಜ್ಯದ ಜವಾಬ್ದಾರಿಗಳಿಂದ ಸರಕಾರ ಬಿಡುಗಡೆಗೊಳಿಸಿದೆ.
ಕಳೆದ 5 ವರ್ಷಗಳಿಂದ ಮನೋಜ್ ಕುಮಾರ್ ಮೀನಾ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಅವರಿಗೆ ಬಿಡುಗಡೆ ನೀಡುವ ಸಲುವಾಗಿ ಇತ್ತೀಚೆಗಷ್ಟೇ ಮತ್ತೋರ್ವ ಐಎಎಸ್ ಅಧಿಕಾರಿ ನವೀನ್ರಾಜ್ ಸಿಂಗ್ ಅವರನ್ನು ಸಿಇಒ ಆಗಿ ನೇಮಕ ಮಾಡಲಾಗಿತ್ತು. ಆದರೆ ಅದನ್ನು ನವೀನ್ ರಾಜ್ ಸಿಂಗ್ ಒಪ್ಪದ ಕಾರಣ ಅವರಿಗೆ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದು, ಜತೆಗೆ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯನ್ನಾಗಿಯೂ ಮಾಡಲಾಗಿದೆ.
ಈ ಕಾರಣದಿಂದ ಮನೋಜ್ಕುಮಾರ್ ಮೀನಾ ಅವರೇ ಸಿಇಒ ಆಗಿ ಮುಂದುವರಿದಿದ್ದರು. ಇದೀಗ ಮಂಗಳವಾರ ಹೊರಬಿದ್ದಿರುವ ಆದೇಶದಲ್ಲಿ ಮನೋಜ್ ಕುಮಾರ್ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ. ಬದಲಿಗೆ ಜು. 7ರಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯಾಗಿ ವಿ.ಅನ್ಬುಕುಮಾರ್ ಅವರನ್ನು ಕೇಂದ್ರ ಚುನಾವಣ ಆಯೋಗ ನೇಮಿಸಿದ್ದು, ಕರ್ತವ್ಯ ವರದಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಅವರನ್ನು ವಸತಿ ಇಲಾಖೆ ಕಾರ್ಯದರ್ಶಿ ಹಾಗೂ ಮಂಡ್ಯ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಹುದ್ದೆಗಳಿಂದ ರಾಜ್ಯ ಸರಕಾರ ಬಿಡುಗಡೆಗೊಳಿಸಿದೆ. ಈ ಸಂಬಂಚಧ ಬುಧವಾರ ಬೆಳಗ್ಗೆ 11ಕ್ಕೆ ಸಿಇಒ ಕಚೇರಿಯಲ್ಲಿ ಸಭೆ ಆಯೋಜನೆಯಾಗಿದ್ದು, ರಾಜ್ಯದ ನೂತನ ಮುಖ್ಯಚುನಾವಣಾಧಿಕಾರಿಯಾಗಿ ಅನ್ಬುಕುಮಾರ್ ಅಧಿಕಾರ ಸ್ವೀಕರಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.