ವಿಜಯಪುರ : ವಚನ ಸಾಹಿತ್ಯ ಕನ್ನಡ ಸಾರಸ್ವತ ಲೋಕಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದು, ಬಸವಣ್ಣನವರ ಸಮಕಾಲೀನ ವಚನಕಾರರು ಈ ಸಮಾಜಕ್ಕೆ ಬಹುದೊಡ್ಡ ಸಂದೇಶ ನೀಡಿ ಹೋಗಿದ್ದಾರೆ. ಇನ್ನೂ ವಚನ ಸಾಹಿತ್ಯ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದ್ದು, ವಚನ ಸಾಹಿತ್ಯ ಸರ್ವಕಾಲಿಕ ಅನನ್ಯ. ವಚನ ಸಾಹಿತ್ಯ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಬಸವನಬಾಗೇವಾಡಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಬಿ.ಮರ್ತೂರ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಲಿಂ.ಪೂಜ್ಯ ಶ್ರೀ ಚೆನ್ನವೀರ ಮಹಾಸ್ವಾಮೀಜಿಗಳು, ಸಾರಂಗಮಠ, ದತ್ತಿ. ವಿಷಯ: ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ.ದಿ. ಮಲ್ಲೇಶಪ್ಪ ಪರಮಣ್ಣ ದೇವರಡ್ಡಿ ದತ್ತಿ. ವಿಷಯ: ವಚನ ಸಾಹಿತ್ಯದ ಮಹತ್ವ. ಮಲ್ಲಿಕಾರ್ಜುನ ಮುತ್ಯಾ ಶಿವಪ್ಪ ಹುಂಡೇಕಾರ ದತ್ತಿ. ಬಸವಣ್ಣನವರ ಸಮಕಾಲೀನ ಶರಣರ ಕುರಿತು ಡಿ.ಎಸ್.ಗುಡ್ಡೋಡಗಿ ದತ್ತಿ ವಿಷಯ: ೧೨ನೇ ಶತಮಾನದ ಶಿವಶರಣೆಯರು ನೀಡಿದ ಸಂದೇಶ ಕುರಿತು ಎಂಬ ವಿವಿಧ ದತ್ತಿನಿಧಿ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ೧೨ನೇ ಶತಮಾನದ ಶಿವಶರಣೆಯರು ಅಂದಿನ ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ಪರಿಹರಿಸುವಲ್ಲಿ ಶ್ರಮಿಸಿದ್ದಾರೆ ಎಂದರು.
ಬಳಿಕ ಬಸವನ ಬಾಗೇವಾಡಿ ತಾಲೂಕ ನಿಕಟಪೂರ್ವ ಕಸಾಪ ಅಧ್ಯಕ್ಷ, ಆರ್.ಜಿ.ಅಳ್ಳಗಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಡೀ ಜಿಲ್ಲೆಯಾದ್ಯಂತ ಸಾಹಿತ್ಯದ ವಾತಾವರಣವನ್ನು ನಿರ್ಮಾಣ ಮಾಡುವ ಮೂಲಕ, ಅನೇಕ ಜಿಲ್ಲಾ, ತಾಲೂಕು ಸಮ್ಮೇಳನಗಳಲ್ಲಿ ವಿದ್ವತ್ ಪೂರ್ಣಗೋಷ್ಠಿಗಳನ್ನು ನೆರವೇರಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದದ್ದು ನಾವೆಲ್ಲ ಅಭಿಮಾನ ಪಡುವ ಸಂಗತಿ ಎಂದು ತಿಳಿಸಿದರು.
ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಎಂಬ ವಿಷಯದ ಕುರಿತು ಖ್ಯಾತ ಪ್ರವಚನಕಾರ್ತಿ ಸುಖದೇವಿ ಅಲಬಾಳಮಠ ಉಪನ್ಯಾಸ ನೀಡುತ್ತಾ ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದೆ. ಬಸವಾದಿ ಶರಣರ ವಚನಗಳು ಅತ್ಯಂತ ಸರಳ ಹಾಗೂ ಜನಸಾಮಾನ್ಯರಿಗೆ ತಿಳಿಯುವಂತೆ ಅನುಭವದ ಮೂಲಕ ರಚನೆಯಾಗಿವೆ ಎಂದರು.
೧೨ನೇ ಶತಮಾನದ ಶಿವಶರಣೆಯರ ಸಂದೇಶಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಎಕ್ಸಲೆಂಟ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯೆ ಪ್ರೊ. ಶ್ವೇತಾ ಬಿರಾದಾರ ಮಾತನಾಡಿ, ಕಾಯಕ, ದಾಸೋಹ, ಲಿಂಗ ಸಮಾನತೆ, ವೈಚಾರಿಕತೆಯ ಮೂಲಕ ಸಮಾಜದ ಅನಿಷ್ಠ ಪದ್ಧತಿಗಳನ್ನು ಕಿತ್ತೊಗೆದು ಸಮಸಮಾಜದ ನಿರ್ಮಾಣ ಮಾಡುವಲ್ಲಿ ಶಿವಶರಣೆಯರು ನೀಡಿ ಹೋದ ಸಂದೇಶಗಳು ಇಂದು ನಮಗೆಲ್ಲ ಸ್ಪೂರ್ತಿಯ ಸೆಲೆಯಾಗಿ ನಿಂತಿವೆ ಎಂದರು.
ಈ ವೇಳೆ ಮುಖ್ಯ ಅತಿಥಿಗಳಾಗಿ ಸಂಗಮೇಶ ಗುಡ್ಡೋಡಗಿ, ವೀರಣ್ಣ ಎಸ್. ಹುಂಡೇಕಾರ, ವಿಜಯ ಹುಂಡೇಕಾರ, ವಿವೇಕ ಹುಂಡೇಕಾರ, ಮುಖ್ಯ ಅತಿಥಿಗಳಾಗಿ ಅರ್ಜುನ ಶಿರೂರ, ಖಾದರ ವಾಲೀಕಾರ, ಸುರೇಶ ಇಂಡಿ, ಮಹಾಂತಮ್ಮ ಇಂಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಜಿ.ಎಸ್.ಬಳ್ಳೂರ, ಅಲಿಸಾಬ ಖಡಕೆ. ಶರಣಮ್ಮ ಹಾದಿಮನಿ, ಸುರೇಖಾ ರಾಠೋಡ, ಶ್ರೀಕಾಂತ ನಾಡಗೌಡ, ಸಿದ್ದು ಮಾನೆ, ಶಾಂತಾ ವಿಭೂತಿ, ದುಂಡಪ್ಪ ಪೂಜಾರಿ, ಗಂಗಮ್ಮ ರಡ್ಡಿ, ಭಾಗೀರಥಿ ಸಿಂಧೆ, ಶರಣಮ್ಮ ಹಾದಿಮನಿ ವಿಜಯಲಕ್ಷ್ಮಿ ಹಳಕಟ್ಟಿ, ಸುರೇಶ ಬೆನಕನಹಳ್ಳಿ, ಬಸನಗೌಡ ಬಿರಾದಾರ, ಪಿ.ಆರ್ ವಾಲಿಕಾರ, ವಿ.ಬಿ.ಕರಜಗಿ, ಮಲ್ಲಿಕಾರ್ಜುನ ಕೆಳಗಡೆ, ಆಶಾ ಬಸನಗೌಡ ಬಿರಾದಾರ, ಸುನೀಲ ವಣರೊಟ್ಟಿ, ಮಹಾಂತೇಶ ಮಠಪತಿ, ಸಿದ್ರಾಮಪ್ಪ ಜಂಗಮಶೆಟ್ಟಿ, ಅರವಿಂದ ಹುಂಡೇಕಾರ ಮುಂತಾದವರು ಉಪಸ್ಥಿತರಿದ್ದರು.



