ಮೈಸೂರು : ವಾಹನದ ಮಾಲೀಕರು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೀಡುವ ಸೇವೆಗಳಿಗಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸದೆ ಆನ್ ಲೈನ್ ಮೂಲಕ ಮನೆಯಲ್ಲಿ ಕುಳಿತು ಅರ್ಜಿಗಳನ್ನು ಸಲ್ಲಿಸಿ ನೇರವಾಗಿ ಸೇವೆಗಳನ್ನು ಪಡೆಯಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್ ಈಶ್ವರ್ ಚವ್ಹಾಣ್ ಹೇಳಿದರು.
ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಮ್ಮ ಕಚೇರಿಯ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ನೀಡಲು, ಮಂಗಳವಾರ ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇಲಾಖೆಯ ಆನ್ ಲೈನ್ ಸೇವೆಯ ಬಗ್ಗೆ ಮಾಹಿತಿ ನೀಡಿದರು.
ಪ್ರತಿ ವರ್ಷದಂತೆ ಈ ವರ್ಷವು ಜನವರಿ ತಿಂಗಳನ್ನು ರಸ್ತೆ ಸುರಕ್ಷತಾ ಮಾಸಚರಣೆ ಆಚರಣೆ ಆಗಿ ಅಚರಿಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಜನರಿಗೆ ಅತಿವೇಗದ ವಾಹನ ಚಾಲನೆ, ವ್ಹೀಲಿಂಗ್, ಡ್ರಿಂಕ್ ಅಂಡ್ ಡ್ರೈವ್ ಗಳ ದುಷ್ಪರಿಣಾಮಗಳು ಹಾಗೂ ಕಾನೂನಿನ ಮೂಲಕ ವಿಧಿಸಬಹುದಾದ ಶಿಕ್ಷೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಕರ್ನಾಟಕ ರಾಜ್ಯದಲ್ಲಿ ರಸ್ತೆ ಅಪಘಾತದಿಂದ ಕಳೆದ ವರ್ಷ 28 ಸಾವಿರ ಸಾವು ನೋವುಗಳು ಉಂಟಾಗಿವೆ ಸಂಚಾರಿ ನಿಯಮ ಪಾಲನೆ ಮಾಡಿದರೆ ಬಹಳಷ್ಟು ಸಾವು ನೋವನ್ನು ತಡೆಗಟ್ಟಬಹುದು ಎಂದರು.
ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಡಿ.ಎಲ್. ಹಾಗೂ ಎಲ್.ಎಲ್.ಆರ್ ಸೇರಿದಂತೆ 26 ಕ್ಕೂ ಹೆಚ್ಚಿನ ಸೇವೆಯನ್ನು ಆನ್ ಲೈನ್ ಮೂಲಕ ನೀಡಲಾಗುತ್ತಿದೆ. ವಾಹನ ತಂತ್ರಾಂಶಕ್ಕೆ ಸೇವೆಗಳಾದ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ತೆರಿಗೆ ಪಾವತಿ, ಕರಾರು ಒಪ್ಪಂದ ಹಾಗೂ ರದ್ದತಿ, ತೆರಿಗೆ ತೀರುವಳಿ ಪತ್ರ ನೀಡಿಕೆ. ನಕಲು ನೋಂದಣಿ ಪತ್ರ, ನೋಂದಣಿ ಪತ್ರ ನವೀಕರಣಗಳಂತ ವಿವಿಧ ಸೇವೆಗಳನ್ನು ಆನ್ಲೈನ್ -ಗೊಳಿಸಲಾಗಿದೆ ಎಂದು ತಿಳಿಸಿದರು.
ವಾಹನದ ಮಾಲೀಕರು ಇಲಾಖೆಯಲ್ಲಿ ನೀಡುವ ಸೇವೆಗಳಿಗೆ ಸಂಬಂಧಿಸಿದಂತೆ ಆರಂಭದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿಕೊಂಡು ಆಧಾರ್ ಓಟಿಪಿ ಆಧಾರದ ಮೇಲೆ ಅರ್ಜಿ ಸಲ್ಲಿಸಿ ದಾಖಲಾತಿಗಳನ್ನು ಅಪ್ಡೇಟ್ ಮಾಡಿ ಶುಲ್ಕ ಪಾವತಿಸಿ ಕಛೇರಿಯಲ್ಲಿ ಸಲ್ಲಿಸಿ ನೇರವಾಗಿ ಸೇವೆಗಳನ್ನು ಪಡೆಯಬಹುದು ಎಂದರು.
ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಆಗಿರುವ ಸಾರಿಗೆ ವಾಹನಗಳ ಸಂಖ್ಯೆ 55,742 ಆಗಿದ್ದು, ಸಾರಿಗೇತರ ವಾಹನಗಳು 11,63,369 ನೋಂಣಿಯಾಗಿದ್ದು ಒಟ್ಟು ಮೈಸೂರು ಜಿಲ್ಲೆಯಲ್ಲಿ ನೋಂದಣಿ ಆಗಿರುವ ವಾಹನಗಳ ಸಂಖ್ಯೆ 12,15,212 ನೋಂದಣಿಯಾಗಿವೆ ಎಂದು ಮಾಹಿತಿ ನೀಡಿದರು. ಪತ್ರಿಕಾ ಗೋಷ್ಠಿಯಲ್ಲಿ ಎ.ಆರ್.ಟಿ.ಒ ರಾಮಚಂದ್ರ ಉಪಸ್ಥಿತರಿದ್ದರು.



