ಮೈಸೂರು : ಮಹಾನಗರಪಾಲಿಕೆಯೂ ಹಂಚ್ಯಾ-ಸಾತಗಳ್ಳಿ ವಲಯದಲ್ಲಿ ನಿರ್ಮಿಸಲು ಮುಂದಾಗಿರುವ ಕಟ್ಟಡ ತ್ಯಾಜ್ಯ ಘಟಕವನ್ನು ಬೇರೆಗೆ ಸ್ಥಳಾಂತರಿಸಬೇಕೆಂದು ಹಂಚ್ಯಾ ಗ್ರಾಮಸ್ಥರು ಆಗ್ರಹಿಸಿದರು.
ಈ ಸಂಬಂಧ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಿದ ಗ್ರಾಮದ ಮುಖಂಡ ಶ್ರೀನಿವಾಸ್ ಮಾತನಾಡಿ, ರಿಂಗ್ ರಸ್ತೆ ಸಮೀಪದಲ್ಲಿ ಇಂತಹ ಕಟ್ಟಡ ತ್ಯಾಜ್ಯ ಘಟಕ ನಿರ್ಮಾಣದಿಂದ ಸ್ಥಳೀಯರಿಗೆ ತೊಂದರೆ ಆಗಲಿದೆ. ಪ್ರಮುಖವಾಗಿ ಇದು ಬಡಾವಣೆ ಆಗಿರುವುದರಿಂದ ಇಲ್ಲಿನ ಧೂಳು, ಪರಿಸರ ಮಾಲಿನ್ಯದ ದುಷ್ಪರಿಣಾಮ ಸ್ಥಳೀಯರಿಗೆ ತೊಂದರೆ ಉಂಟು ಮಾಡಲಿದೆ.
ಇಂತಹ ಘಟಕಗಳನ್ನು ಬಡಾವಣೆಯಿಂದ ದೂರ ಮತ್ತು ಈಗಾಗಲೇ ಪಾಲಿಕೆಗೆ ಒಳಪಡುವ ಜಾಗದ ಹೊರಗೆ ಅದರಲ್ಲೂ ಪೆರಿಫೆರಲ್ ರಿಂಗ್ ರಸ್ತೆಯಿಂದಾಚೆಗೆ ನಿರ್ಮಿಸಬೇಕು. ಈ ಕೂಡಲೇ ಇದನ್ನು ಸ್ಥಳಾಂತರಿಸಬೇಕು ಎಂದರು. ಹದಿನೈದು ದಿನಗಳಲ್ಲಿ ಇದನ್ನು ವರ್ಗಾವಣೆ ಮಾಡದಿದ್ದರೆ ಗ್ರಾಮಸ್ಥರು ಸೇರಿ ಒಟ್ಟುಗೂಡಿ ಅಧಿಕಾರಿಗಳ ನಡೆ ವಿರುದ್ಧ ಶಾಂತಿಯುತವಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಗ್ರಾಮದ ಮುಖಂಡರಾದ ಎಚ್.ವಿ.ವೆಂಕಟೇಗೌಡ, ಬೋರೇಗೌಡ, ತಮ್ಮೇಗೌಡ, ಮಹದೇವು, ಉಮೇಶ್, ಗವಿಸಿದ್ದೇಗೌಡ, ಸಿ.ಕುಮಾರ,ಅನಿಲ್ ಕುಮಾರ, ಸಿದ್ದರಾಜು, ದೇವೇಗೌಡ, ಚಾಮುಂಡಿ, ನಂದೀಶ, ಪ್ರತಾಪಕುಮಾರ್, ನಾಗಣ್ಣ, ಮಹೇಶ್, ಚಾಮೇಗೌಡ ಇನ್ನಿತರರು ಉಪಸ್ಥಿತರಿದ್ದರು.



