ಬೆಂಗಳೂರು: ದೇವರ ಆಶೀರ್ವಾದ, ಜನರ ಬೆಂಬಲ, ಮೋದಿಯ ಅಲೆಯ ಬಲದಿಂದ ರಾಜ್ಯದ ಎಲ್ಲ ೨೮ ಕ್ಷೇತ್ರವನ್ನು ಗೆದ್ದು ಮೋದಿ ಅವರಿಗೆ ರಾಜ್ಯದ ಉಡುಗೊರೆಯನ್ನಾಗಿ ನೀಡುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಮಂಗಳವಾರ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಚಿಕ್ಕಬಳ್ಳಾಪುರ ಅಭ್ಯರ್ಥಿ ಸುಧಾಕರ್ ಭೇಟಿ ನೀಡಿದರು. ಯಡಿಯೂರಪ್ಪ ಅವರಿಗೆ ಯುಗಾದಿ ಶುಭಾಶಯ ಕೋರಿ, ಚುನಾವಣಾ ಪ್ರಚಾರ ಕಾರ್ಯ, ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರು. ಪ್ರಚಾರ ಕಾರ್ಯಕ್ಕೆ ಆಗಮಿಸುವಂತೆ ಯಡಿಯೂರಪ್ಪನವರಿಗೆ ಸುಧಾಕರ್ ಮನವಿ ಮಾಡಿದರು. ಇದಕ್ಕೆ ಯಡಿಯೂರಪ್ಪ ಸಮ್ಮತಿಸಿ ಒಂದು ದಿನ ಬಂದು ಪ್ರಚಾರ ಮಾಡುವ ಭರವಸೆ ನೀಡಿದರು.
೪೦೦ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎನ್ನುವ ಗುರಿ ನಮ್ಮ ವರಿಷ್ಠರಲ್ಲಿದೆ. ಹಾಗಾಗಿ ರಾಜ್ಯದ ಎಲ್ಲ ೨೮ ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಿ ದೆಹಲಿಗೆ ಕರೆತರಲಿದ್ದೇನೆ ಎಂದು ಹೇಳಿದ್ದೇನೆ. ಆ ಭರವಸೆ ನನಗಿದೆ. ಅಮಿತ್ ಶಾ ಹಾಗೂ ಮೋದಿ ಅವರಿಗೂ ಇದನ್ನು ಹೇಳಿದ್ದೇನೆ. ಹಾಗಾಗಿ ಈ ಬಾರಿ ನಿಶ್ಚಿತವಾಗಿ ಎಲ್ಲ ಕ್ಷೇತ್ರ ಗೆದ್ದು ನಮ್ಮ ಕೊಡುಗೆ ಕರ್ನಾಟಕದ ಕೊಡುಗೆ ಎಂದು ಮೋದಿ ಅವರಿಗೆ ೨೮ ಸಂಸತ್ ಸ್ಥಾನದ ಉಡುಗೊರೆ ಕೊಡಲಿದ್ದೇವೆ ಎಂದು ಹೇಳಿದರು.