ಬೆಂಗಳೂರು : ಬಳ್ಳಾರಿಯನ್ನು ʻರಿಪಬ್ಲಿಕ್ ಆಫ್ ಬಳ್ಳಾರಿʼ ಮಾಡಿದ್ದೇ ಬಿಜೆಪಿ ಅವರು. ಗಲಾಟೆ ಬಗ್ಗೆ ತನಿಖೆ ಆಗುತ್ತಿದೆ. ಬಿಜೆಪಿ ಅವರು ನಮಗೆ ಪಾಠ ಹೇಳಿಕೊಡೋದು ಬೇಡ ಅಂತ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಳ್ಳಾರಿ ಗಲಾಟೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಳ್ಳಾರಿ ಎಸ್ಪಿ ಕರ್ತವ್ಯ ಲೋಪ ಮಾಡಿದ್ದಕ್ಕೆ ಅಮಾನತು ಮಾಡಲಾಗಿದೆ. ವೈಯಕ್ತಿಕ ಯಾವುದು ಇಲ್ಲ. ಅಲ್ಲಿ ಗಲಾಟೆ ಆಗಿದ್ದು ನಿಜವಾಗಿದೆ. ವಾತಾವರಣ ಕೆಟ್ಟಿದ್ದು ನಿಜ ಅದಕ್ಕೆ ಕ್ರಮ ಆಗಿದೆ. ಈಗಾಗಲೇ ಸಿಎಂ, ಡಿಸಿಎಂ, ಗೃಹ ಸಚಿವರು ಕಾನೂನು ಪ್ರಕಾರ ಕ್ರಮ ತಗೋತಾರೆ ತನಿಖೆ ಆಗಲಿ ಅಂತ ತಿಳಿಸಿದರು.
ʻರಿಪಬ್ಲಿಕ್ ಆಫ್ ಬಳ್ಳಾರಿʼ ಮಾಡಿದ್ದು ಬಿಜೆಪಿ ಅವರು, ಅಲ್ಲಿ ಮಾತಾಡಿರೋದು ಎಲ್ಲರು ಜೈಲಿಗೆ ಹೋಗಿ ಬಂದವರು. ನಮಗೆ ಕಾನೂನು ಪಾಠ ಹೇಳ್ತಾರಾ? ಆ ಭಾಗ ಹಾಳು ಮಾಡಿದವರು ನಮಗೆ ಕಾನೂನು ಸಂವಿಧಾನ ಹೇಳಿ ಕೊಡ್ತಾರಾ? ಪೋಸ್ಟರ್ ಹಾಕಿದ್ರೆ ಏನ್ ತಪ್ಪು? ಹೆಸರಿಗೆ ಮಾತ್ರ ರಾಮನ ಜಪ ಮಾಡೋದು ಅಲ್ಲ. ರಾಮಾಯಣ ಬರೆದ ವಾಲ್ಮೀಕಿ ಪೋಸ್ಟರ್ ಸಹಿಸೋಕೆ ಆಗೊಲ್ಲವಾ? ಸಾರ್ವಜನಿಕರಿಗೆ ಅನಾನುಕೂಲ ಮಾಡಬಾರದು ಇಂತಹ ವಾತಾವರಣ ಸೃಷ್ಟಿ ಮಾಡೋದು ಸರಿಯಲ್ಲ ಅಂತ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅವರು ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಮಾಡೋಕೆ ಹೊರಟಿಲ್ಲ. ಅದು ಬಿಜೆಪಿ ಅವರು ಮಾಡಿರೋದು. ಕರ್ನಾಟಕ ಕೂಡಾ ಕಾಂಗ್ರೆಸ್ ರಿಪಬ್ಲಿಕ್. ಜನ ಮತ ಹಾಕಿ ನಮ್ಮನ್ನ ಗೆಲ್ಲಿಸಿದ್ದಾರೆ ಅಂತ ಬಿಜೆಪಿ ವಿರುದ್ದ ಕಿಡಿ ಕಾರಿದರು.



