ಮೈಸೂರು : ಕಾರಣಾಂತರದಿಂದ ಆತ್ಮಹತ್ಯೆಗೆ ಶರಣಾದ ಪತ್ನಿಯ ಸಾವಿನ ಸುದ್ದಿ ಕೇಳಿದ ಪತಿ, ತೀವ್ರ ಆಘಾತಕ್ಕೆ ಒಳಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಂಪುರದಲ್ಲಿ ನಡೆದಿದೆ. ವಿಜಯಲಕ್ಷ್ಮಿ(೫೨) ಆತ್ಮಹತ್ಯೆಗೆ ಶರಣಾದ ಪತ್ನಿಯಾಗಿದ್ದು, ಈ ವಿಷಯ ತಿಳಿದ ಪತಿ ಮಂಜುನಾಥ್(೫೮) ಹೃದಯಾಘಾತದಿಂದ ಮೃತಪಟ್ಟವರು.
ವಿಜಯಲಕ್ಷ್ಮಿ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಯಿಂದ ಗುಣಮುಖರಾಗದ ಹಿನ್ನಲೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯ ಅಗಲಿಕೆ ಸುದ್ದಿ ಕೇಳಿದ ಪತಿ ಮಂಜುನಾಥ್ ತಕ್ಷಣ ಹೃದಯಾಘಾತಕ್ಕೆ ಒಳಗಾದರು. ಕೂಡಲೇ ಮಂಜುನಾಥ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಸಾವಿನಲ್ಲೂ ಒಂದಾದ ದಂಪತಿ : ಅಶೋಕಾಪುರಂ ರೈಲ್ವೆ ವರ್ಕ್ಷಾಪ್ನಲ್ಲಿ ಮಂಜುನಾಥ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು ಮಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಮಗಳು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.