ಬೆಂಗಳೂರು: ವೃತ್ತಿಪರ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಸುಗಮಗೊಳಿಸುವ ಉದ್ದೇಶದಿಂದ, 2025ನೇ ಸಾಲಿನ ಸಿಇಟಿ ಅಭ್ಯರ್ಥಿಗಳು ಹಾಗೂ ಪೋಷಕರಿಗೆ ಸೀಟು ಹಂಚಿಕೆ ವಿಧಾನ ಕುರಿತು ಸಮಗ್ರ ಮಾಹಿತಿ ನೀಡಲು, ಜೂನ್ 28ರಂದು ರಾಜ್ಯದ ವಿವಿಧ ಸರ್ಕಾರಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ “ಯುಜಿಸಿಇಟಿ-2025: ಸೀಟು ಹಂಚಿಕೆ ಮಂಥನ” ಕಾರ್ಯಾಗಾರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಈ ಕಾರ್ಯಾಗಾರವು ರಾಜ್ಯದ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು, 8 ಅನುದಾನಿತ, 6 ವಿಟಿಯು ಸಂಯೋಜಿತ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 9 ಜಿಲ್ಲೆಗಳ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನಡೆಯಲಿದೆ. ಹಬ್ಬಳಾದ, ಶೈಕ್ಷಣಿಕ ಪೂರೈಕೆ ಇಲ್ಲದ ಜಿಲ್ಲೆಗಳಲ್ಲೂ ಪಾಲಿಟೆಕ್ನಿಕ್ ಕ್ಯಾಂಪಸ್ಗಳಲ್ಲಿ ಕಾರ್ಯಕ್ರಮ ನಡೆಯಲಿದೆ.
ಅಭ್ಯರ್ಥಿಗಳಲ್ಲಿ ಸಾಮಾನ್ಯವಾಗಿ ಉದ್ಭವವಾಗುವ “ಕೌನ್ಸೆಲಿಂಗ್ ಹೇಗೆ?”, “ಆಪ್ಷನ್ ಎಂಟ್ರಿ ಹೇಗೆ?”, “ಕಾಲೇಜು ಆಯ್ಕೆ ಪ್ರಕ್ರಿಯೆ ಏನು?” ಎಂಬ ಅನುಮಾನಗಳಿಗೆ ಸ್ಪಷ್ಟ ಉತ್ತರಗಳು ಈ ಕಾರ್ಯಾಗಾರದಲ್ಲಿ ಲಭ್ಯವಿರಲಿವೆ. ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆ ಗೊಂದಲದಿಂದಾಗಿ ಇದನ್ನೇ ಕೆಲವರು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಪೋಷಕರು/ ವಿದ್ಯಾರ್ಥಿಗಳನ್ನು ಸುಲಿಗೆ ಮಾಡಿರುವ ಪ್ರಕರಣಗಳೂ ನಡೆದಿವೆ ಎಂದು ಸಚಿವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಲೈವ್ ಡೆಮೊ, ಪ್ರಾತ್ಯಕ್ಷಿಕೆ ಹಾಗೂ ತಜ್ಞರ ಸಮಾಲೋಚನೆಯಿಂದಾಗಿ ವಿದ್ಯಾರ್ಥಿಗಳಿಗೆ ಸ್ಪಷ್ಟ ಅರಿವು ಸಿಗಲಿದೆ. ಈ ಮೂಲಕ ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಲು ನೆರವಾಗಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.