Monday, June 9, 2025
Google search engine

Homeಸ್ಥಳೀಯಯಳಂದೂರು: ಬಿರುಬಿಸಿಲಿನ ನಡುವೆಯೂ ಶಾಂತಿಯುತ ಮತದಾನ

ಯಳಂದೂರು: ಬಿರುಬಿಸಿಲಿನ ನಡುವೆಯೂ ಶಾಂತಿಯುತ ಮತದಾನ

ಯಳಂದೂರು: ತಾಲೂಕಿನಾದ್ಯಂತ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯು ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆಯಿಂದಲೇ ಕೆಲವು ಮತಗಟ್ಟೆಗಳಲ್ಲಿ ಜನಜಂಗುಳಿ ಕಂಡುಬಂದಿತು. ಬಿಸಿಲಿನ ಬೇಗೆಯಲ್ಲಿ ಮಧ್ಯಾಹ್ನದ ವೇಳೆ ಮತದಾನ ಕೊಂಚ ಮಂದಗತಿಯಲ್ಲಿ ನಡೆದು ಸಂಜೆ ವೇಳೆ ಮತ್ತೆ ಬಿರುಸನ್ನು ಪಡೆದುಕೊಂಡಿತು.

ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯದ ಮದ್ಯಭಾಗದಲ್ಲಿರುವ ಪುರಾಣಿ ಪೋಡು ಸೇರಿದಂತೆ ತಾಲೂಕಿನ ಗುಡ್ಡಗಾಡು ಪ್ರದೇಶಗಳು, ಗ್ರಾಮಗಳು ಹಾಗೂ ಪಟ್ಟಣದಲ್ಲಿ ಮತದಾನ ನಡೆಯಿತು. ಮಧ್ಯಾಹ್ನದ ಬಿರುಬಿಸಿಲಿಗೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಅನೇಕ ರಾಷ್ಟ್ರೀಯ ಪಕ್ಷ, ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಮತಗಟ್ಟೆಯ ಗಡಿಯಂಚಿನಲ್ಲಿ ನಿಂತು ತಮ್ಮ ಬೆಂಬಲಿಗರಿಗೆ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದರು. ಅಲ್ಲದೆ ಬಿಸಿಲಿಗೆ ಮಜ್ಜಿಗೆ, ತಂಪು ಪಾನೀಯ ಹಾಗೂ ಕುಡಿಯುವ ನೀರಿನ ಮೊರೆ ಹೋಗುತ್ತಿದ್ದ ದೃಶ್ಯ ಅಲ್ಲಲ್ಲಿ ಕಾಣಸಿಗುತ್ತಿತ್ತು.

ಕೆಟ್ಟು ಹೋದ ಇವಿಎಂ : ತಾಲೂಕಿನ ಚಾಮಲಾಪುರ, ಹೊನ್ನೂರು, ಯರಗಂಬಳ್ಳಿ ಗ್ರಾಮಗಳಲ್ಲಿ ಮತಗಟ್ಟೆಗಳಲ್ಲಿ ಮತ ಯಂತ್ರಗಳು ಕೆಲವು ಸಮಯ ಕೆಟ್ಟು ಆತಂಕ ಸೃಷ್ಟಿಸಿತು. ಇದು ಮತದಾರರಲ್ಲಿ ಗೊಂದಲ ಸೃಷ್ಟಿಸಲು ಕಾರಣವಾಯಿತು. ಸಂಬಂಧಪಟ್ಟ ತಾಂತ್ರಿಕ ಸಿಬ್ಬಂಧಿ ಇದನ್ನು ಸರಿಪಡಿಸುವ ತನಕ ಮತದಾರರು ಇಲ್ಲೇ ಕಾದು ನಿಂತು ನಂತರ ಮತದಾನ ಮಾಡಿದರು.

ಮತದಾನ ಮಾಡಿದ ಗಣ್ಯರು : ಚಾಮರಾಜನಗರ ಲೋಕ ಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾದ ಎಸ್.ಬಾಲರಾಜು ರವರು ತಮ್ಮ ಕುಟುಂಬ ಸಮೇತ ತಮ್ಮ ಸ್ವಗ್ರಾಮವಾದ ತಾಲೂಕಿನ ಮದ್ದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೨ರ ಮತಗಟ್ಟೆ ಸಂಖ್ಯೆ ೧೮೭ ರಲ್ಲಿ ತಮ್ಮ ಪತ್ನಿ ಹಾಗೂ ಕುಟುಂಬ ಸದಸ್ಯರ ಜತೆಗೆ ಆಗಮಿಸಿ ಮತ ಚಲಾಯಿಸಿದರು. ಚಾಮರಾಜನಗರ ಕ್ಷೇತ್ರದ ವಿಧಾನ ಸಭಾ ಕ್ಷೇತ್ರ ಶಾಸಕ ಸಿ. ಪುಟ್ಟರಂಗಶೆಟ್ಟಿ ಉಪ್ಪಿನಮೋಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ ಮತಗಟ್ಟೆಗೆ ಭೇಟಿ ನೀಡಿ ಮತಚಲಾಯಿಸಿದರು.

Oplus_0

೩ ಲಕ್ಷ ಅಂತರದ ಗೆಲುವಿನ ವಿಶ್ವಾಸ: ತಾಲೂಕಿನ ಮಾಂಬಳ್ಳಿ ಗ್ರಾಮದ ಮಾಜಿ ಶಾಸಕ ಹಾಗು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್. ಜಯಣ್ಣ ತಮ್ಮ ಬೆಂಬಲಿಗರ ಜತೆಗೆ ಗ್ರಾಮದ ಕಮಲಮ್ಮ ಕರಿಗೇಗೌಡರ ಪ್ರೌಢಶಾಲೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈ ಬಾರಿ ಚಾಮರಾಜನಗರ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಲಿದೆ. ಕ್ಷೇತ್ರದ ಅಭ್ಯರ್ಥಿ ಸುನೀಲ್ ಬೋಸ್ ಬಾರಿ ೩ ಲಕ್ಷ ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ರಾಜ್ಯದಲ್ಲಿ ಈ ಬಾರಿ ೨೦ ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ವಿ.ವಿ.ಯ ಸಿಂಡಿಕೇಟ್‌ನ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಕಿನಕಹಳ್ಳಿ ರಾಚಯ್ಯ ತಮ್ಮ ಬೆಂಬಲಿಗರ ಜತೆಗೆ ಆಗಮಿಸಿ ಕಿನಕಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

Oplus_0
RELATED ARTICLES
- Advertisment -
Google search engine

Most Popular