ಮಂಡ್ಯ: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯ ಬೆನ್ನುಬಿದ್ದ ಹಿಂದೂ ಮುಖಂಡನೊಬ್ಬ ನಿರಂತರ ನಾಲ್ಕು ವರ್ಷಗಳಿಂದ ಆಕೆಗೆ ಕಿರುಕುಳ ನೀಡಿದ್ದಾನೆ. ಅಲ್ಲದೆ, ಆಕೆಗೆ ನಿಶ್ಚಯವಾಗುತ್ತಿದ್ದ ಮದುವೆಯನ್ನೆಲ್ಲ ರದ್ದು ಮಾಡಿಸಿದ್ದಲ್ಲದೆ, ಆ್ಯಸಿಡ್ ದಾಳಿ ಮಾಡುವ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಸದ್ಯ ಆತನ ವಿರುದ್ಧ ಮಂಡ್ಯದ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ನೀಡಿದ್ದ ದೂರಿನ ಆಧಾರದಲ್ಲಿ ಹಿಂದೂ ಮುಖಂಡ ಚಿಕ್ಕಬಳ್ಳಿ ಬಾಲಕೃಷ್ಣ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
4 ವರ್ಷಗಳ ಹಿಂದೆ ಸಂತ್ರಸ್ತೆ ಹಾಗೂ ಬಾಲಕೃಷ್ಣಗೆ ಮದುವೆ ನಿಶ್ಚಯವಾಗಿತ್ತು. ಆ ವೇಳೆ, ಸಂತ್ರಸ್ತೆಯು ಬಾಲಕೃಷ್ಣ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದರು. ಆದರೆ, ಬಾಲಕೃಷ್ಣ ಹಲವು ಸುಳ್ಳುಗಳನ್ನು ಹೇಳಿ ಮದುವೆ ನಿಶ್ಚಯ ಮಾಡಿಕೊಂಡಿದ್ದು ನಂತರ ಸಂತ್ರಸ್ತೆಯ ಅರಿವಿಗೆ ಬಂದಿತ್ತು. ಹೀಗಾಗಿ ಮದುವೆ ನಿರಾಕರಿಸಿದ್ದರು. ಇದು ಬಾಲಕೃಷ್ಣನನ್ನು ಕೆರಳಿಸಿತ್ತು.
ಆದರಿಂದ ಕೆರಳಿದ ಬಾಲಕೃಷ್ಣ, ಆಕೆಯ ಮದುವೆ ಪ್ರಸ್ತಾಪಗಳನ್ನು ಹಾಳುಮಾಡಲು ಹಳೆಯ ಫೋಟೋಗಳನ್ನು ತೋರಿಸಿ ಅಪಪ್ರಚಾರ ಮಾಡುತ್ತಿದ್ದ. ಅವಾಚ್ಯ ಶಬ್ದಗಳಿಂದ ನಿಂದನೆ, ಸಾರ್ವಜನಿಕವಾಗಿ ಹೀನಾಯವಾಗಿ ಮಾತನಾಡಿದ ಹಿನ್ನೆಲೆಯಲ್ಲಿ, ಆಕೆ ಮಾನಸಿಕವಾಗಿ ಕಂಗೆಡುತ್ತಿದ್ದಳು. ಅಲ್ಲದೆ, ಆತ ಆ್ಯಸಿಡ್ ಎರೆಚುವುದಾಗಿ ಹಾಗೂ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ನೀನು ಬೇರೆಯವರನ್ನು ಮದುವೆಯಾಗಲು ಬಿಡಲ್ಲ. ನಿನ್ನ ಮದುವೆ ನಿಲ್ಲಿಸುತ್ತೆನೆ, ನಿನ್ನನ್ನು ಸಜೀವವಾಗಿ ಕೊಲ್ಲುತ್ತೆನೆ’ ಎಂಬೆಲ್ಲ ಭಯಾನಕ ಬೆದರಿಕೆಗಳಿಂದ ಹೆದರಿಸಿ ಆರೋಪಿಯು ಪ್ರಾಯ ಭಯ ಉಂಟು ಮಾಡಿರುತ್ತಾನೆ. ಈ ಕುರಿತು ತನ್ನ ದೊಡ್ಡಮ್ಮ ಲಕ್ಷ್ಮಮ್ಮ ಹಾಗೂ ಸಿಕೆ ಪದ್ಮ ಎಂಬವರು ಮಧ್ಯಸ್ಥಿಕೆ ವಹಿಸಿದ್ದರೂ ಬಾಲಕೃಷ್ಣನ ವರ್ತನೆ ಬದಲಾಗಲಿಲ್ಲ. ಇದೀಗ ಯುವತಿ, ಬಾಲಕೃಷ್ಣನಿಂದ ರಕ್ಷಣೆ ಕೋರಿ ಪೊಲೀಸರಿಗೆ ಕಿರುಕುಳದ ದೂರನ್ನು ಸಲ್ಲಿಸಿದ್ದಾಳೆ.