ಬೆಂಗಳೂರು : ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳಿಗೂ ಚುನಾವಣೆ ನಡೆಯುವುದು ಖಚಿತ. ನಾನಂತೂ ಜಿಬಿಎ ಪಾಲಿಕೆಗಳ ಚುನಾವಣೆ ಮಾಡುತ್ತೇನೆ. ಇದಕ್ಕಾಗಿ ಎಲ್ಲ ಆಕಾಂಕ್ಷಿಗಳು ಸಿದ್ಧತೆ ಮಾಡಿಕೊಳ್ಳಿ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಈ ಬಗ್ಗೆ ಕ್ವೀನ್ಸ್ ರಸ್ತೆಯಲ್ಲಿರುವ ಭಾರತ ಜೋಡೋ ಭವನದಲ್ಲಿ ಜಿಬಿಎ ಪಾಲಿಕೆಗಳ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಹಾಗೂ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ನಾನಂತೂ ಜಿಬಿಎ ಚುನಾವಣೆ ಮಾಡುತ್ತೇನೆ. 369 ವಾರ್ಡ್ಗಳಿಗೂ ಚುನಾವಣೆ ನಡೆದೇ ನಡೆಯುತ್ತದೆ. ಈವರೆಗೆ 963 ಜನರು ಟಿಕೆಟ್ಗಾಗಿ ಅರ್ಜಿ ಹಾಕಿದ್ದೀರಿ. ಹಿಂದೆ ಬಹಳಷ್ಟು ಜನರಿಗೆ ವಿಧಾನಸಭೆಗೆ ಟಿಕೆಟ್ ನೀಡಿಲ್ಲ. ನನಗೂ ಆ ವಿಚಾರವಾಗಿ ಸಮಾಧಾನ ಇಲ್ಲ. ಯಾರಿಗೆ ಟಿಕೆಟ್ ಕೊಟ್ಟಿಲ್ಲವೋ ಅಂತಹ 47 ಮಂದಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದೇವೆ ಎಂದರು.
ಇನ್ನೂ ಈ ಚುನಾವಣೆ ಬ್ಯಾಲೆಟ್ ಪೇಪರ್ ಆಧಾರದ ಮೇಲೆ ನಡೆಯಲಿದ್ದು, ನಿಮ್ಮ ನಿಮ್ಮ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ ಮೇಲೆ ನಿಗಾ ವಹಿಸಬೇಕು. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಮತ್ತೊಂದು ದಿನ ನಿಮ್ಮ ಹಾಗೂ ಬಿಎಲ್ಒಗಳ ಜತೆಗೆ ಸಭೆ ನಡೆಸುತ್ತೇನೆ. ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡು ಶತಾಯಗತಾಯ ಐದೂ ಪಾಲಿಕೆಗಳನ್ನೂ ಗೆಲ್ಲಬೇಕು ಎಂದು ತಿಳಿಸಿದರು.
ಮುಂದುವರೆದು, ಬಿಜೆಪಿ ಮತಗಳ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ನಮ್ಮ ಪಕ್ಷದ ಮತಗಳು ಹಾಗೂ ನಿಮ್ಮ ವೈಯಕ್ತಿಕ ಮತಗಳನ್ನು ಕಾಪಾಡಿಕೊಳ್ಳಿ. ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ನಿಮಗೆ ಮತ ವಿಶ್ವಾಸ ಇರುವ ಕಡೆ ಹೆಚ್ಚು ಗಮನ ನೀಡಿ. ಬಿಜೆಪಿಯವರು ಗ್ಯಾರಂಟಿಗಳನ್ನು ವಿರೋಧಿಸುತ್ತಿದ್ದಾರೆ. ಅದನ್ನು ಜನರಿಗೆ ತಲುಪಿಸಿ ಎಂದು ಕರೆ ನೀಡಿದರು.
ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಮನ್ಸೂರ್ ಅಲಿ ಖಾನ್, ಎಐಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷರಾದ ರಾಜೀವ್ ಗೌಡ, ಶಾಸಕ ಎ.ಸಿ.ಶ್ರೀನಿವಾಸ್, ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಗೋವಿಂದರಾಜು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯಾ ರೆಡ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ ಗೌಡ ಮತ್ತಿತರರು ಹಾಜರಿದ್ದರು.



