ಕೆ.ಆರ್.ನಗರ: ಅನುದಾನಿತ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಗಳ ಗಳಿಕೆ ರಜೆ ನಗದೀಕರಣಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಪದಾಧಿಕಾರಿಗಳು ಶಾಸಕ ಡಿ. ರವಿಶಂಕರ್ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಜ್ಯೋತಿಕುಮಾರ್ ಮಾತನಾಡಿ, 2023-24ರಿಂದ ಈವರೆಗೆ ತಾಲೂಕಿನ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 13 ಮಂದಿ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಸುಮಾರು 68 ಲಕ್ಷ ರೂ. ಬಿಡುಗಡೆ ಆಗಬೇಕಿದೆ ಎಂದು ತಿಳಿಸಿದರು. ವೇತನ ಮತ್ತು ಇತರೆ ಸೌಲಭ್ಯಗಳ ಕೊರತೆಯಿಂದ ನಿವೃತ್ತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಮನವಿಗೆ ಸ್ಪಂದಿಸಿದ ಶಾಸಕ ಡಿ. ರವಿಶಂಕರ್, ಸಂಬಂಧಪಟ್ಟ ಇಲಾಖೆಯ ಉಪನಿರ್ದೇಶಕರಿಗೆ ದೂರವಾಣಿ ಮೂಲಕ ಸೂಚನೆ ನೀಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂಘದ ಜಿಲ್ಲಾ ಪರಿಷತ್ ಸದಸ್ಯ ಎಂ.ಎಸ್.ಲೋಕೇಶ್, ಗೌರವಾಧ್ಯಕ್ಷ ಬಿ.ಟಿ.ಗೋವಿಂದರಾಜು, ಕಾರ್ಯದರ್ಶಿ ರೇವಣ್ಣ, ಪದಾಧಿಕಾರಿಗಳಾದ ಹೆಬ್ಬಾಳುಸತೀಶ್, ಶಶಿಕುಮಾರ್, ಟಿ.ಎಂ.ಮನೋಹರ, ಟಿ.ಕೆ.ಮಹದೇವ್, ದೊಡ್ಡಬೋರನಾಯಕ ಸೇರಿದಂತೆ ಇತರರು ಹಾಜರಿದ್ದರು.



