ಬೆಂಗಳೂರು : ವಿಧಾನಸಭೆಯಲ್ಲಿಂದು ಇ ಖಾತಾ ಲಂಚಾವತಾರದ ಸದ್ದು ಕೇಳಿಬಂತು. ರಾಜ್ಯ ಸರ್ಕಾರದಲ್ಲಿ ಲಂಚ ಇಲ್ಲ ಎಂದು ಸವಾಲು ಹಾಕಿದ್ದ ಡಿಕೆಶಿ ಎದುರೇ ವಿಪಕ್ಷ ನಾಯಕ ಆರ್ ಅಶೋಕ್, ಇ ಖಾತಾಕ್ಕಾಗಿ ಲಂಚ ಪಡೆದ ಪ್ರಕರಣಗಳನ್ನು ದಾಖಲೆ ಸಮೇತ ತೆರೆದಿಟ್ಟರು.
ಬೆಂಗಳೂರು ಅಭಿವೃದ್ಧಿ ಕುರಿತ ಚರ್ಚೆ ವೇಳೆ ಆರ್ ಅಶೋಕ್, ಇ ಖಾತಾ ಲಂಚಾವತಾರ ಬಗ್ಗೆ ಮಾತನಾಡಿದರು. ರಮೇಶ್ ಬಾಬು ಎಂಬ ಬಿಬಿಎಂಪಿ ಅಧಿಕಾರಿ ಇ ಖಾತಾ ಮಾಡಿಸಿ ಕೊಡಲು 30,000 ರೂ. ಪಡೆದ ಪ್ರಕರಣ ಬಗ್ಗೆ ತಿಳಿಸಿದರು. ಈ ಪೈಕಿ 15 ಸಾವಿರ ರೂ. ಫೋನ್ ಪೇ ಮೂಲಕ ಪಡೆದ ಬಗ್ಗೆ ಸದನದಲ್ಲಿ ಅಶೋಕ್ ದಾಖಲೆ ಬಿಡುಗಡೆ ಮಾಡಿದರು. ಲಂಚ ನೀಡಿದ್ರೂ ಇ ಖಾತಾ ಅರ್ಜಿ ತಿರಸ್ಕರಿಸಲಾಗಿತ್ತು. ಸರ್ಕಾರದ ಲಂಚಾವತಾರಕ್ಕೆ ಸಾಕ್ಷಿ ಇದು ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ರಮೇಶ್ ಬಾಬುಗೆ ವ್ಯಕ್ತಿಯೊಬ್ಬರು ಒಟ್ಟು ಲಂಚ ಕೊಟ್ಟಿದ್ದು 30 ಸಾವಿರ, ಅದರಲ್ಲಿ 15 ಸಾವಿರ ಫೋನ್ ಪೇ ಮಾಡಿದ್ರು. ಯಾವಾಗ ಇ ಖಾತಾ ಆಗದೇ ರಿಜೆಕ್ಟ್ ಆಯ್ತೋ ಆ ಅಧಿಕಾರಿ 20 ಸಾವಿರ ಮಾತ್ರ ವಾಪಸ್ ಕೊಟ್ಟರು. ಇನ್ನೂ ಹತ್ತು ಸಾವಿರ ವಾಪಸ್ ಕೊಡಲಿಲ್ಲ. ಹಣ ಕೊಟ್ಟವರು ಗ್ರಾಹಕರ ಕೋರ್ಟ್ ಮೊರೆ ಹೋಗಿದ್ದಾರೆ. ಡಿಕೆಶಿ ಅವರು ಸಾಕ್ಷಿ ಗುಡ್ಡೆ ಕೇಳ್ತಾರಲ್ಲ, ಇಲ್ಲಿದೆ ನೋಡಿ ಲಂಚದ ಸಾಕ್ಷಿ ಗುಡ್ಡೆ ಎಂದು ಡಿಕೆಶಿಗೆ ಅಶೋಕ್ ಟಕ್ಕರ್ ಕೊಟ್ಟರು. ಇನ್ನು, ಇ ಖಾತಾ ಮಾಡಿಸೋದನ್ನೇ ಬಿಬಿಎಂಪಿ ಅಧಿಕಾರಿಗಳು ಮಾಫಿಯಾ ಮಾಡಿಕೊಂಡಿದ್ದಾರೆ. 20 ಸಾವಿರ, 40 ಸಾವಿರ ಫೋನ್ ಪೇ ಮಾಡಿಸಿಕೊಳ್ಳುತ್ತಾರೆ ಎಂದು ಇನ್ನಷ್ಟು ದಾಖಲೆ ತೋರಿಸಿದರು.
ಇನ್ನು ದೊಡ್ಡ ದೊಡ್ಡ ಉದ್ಯಮಿಗಳು ಬಿಬಿಎಂಪಿಗೆ ಸಾವಿರಾರು ಕೋಟಿ ತೆರಿಗೆ ಬಾಕಿ ಕೊಡಬೇಕಿದ್ದರೂ ಅವರ ಮೇಲೆ ಸರ್ಕಾರ ಹೋಗಲ್ಲ, ಬಡವರ ಮೇಲೆ ಮಾತ್ರ ಪ್ರಹಾರ. ಮನೆ ತೆರಿಗೆ ಕಟ್ಟಿದ್ರೂ ಕಟ್ಟಿಲ್ಲ ಅಂತ ವ್ಯಕ್ತಿಯೊಬ್ಬರಿಗೆ ನೊಟೀಸ್ ಜಾರಿ ಮಾಡಿ ಮನೆ ಹರಾಜು ಹಾಕ್ತೀವಿ ಅಂದಿದ್ದಾರೆ ಅಂತ ಮತ್ತೊಂದು ಪ್ರಕರಣ ಹೇಳಿದರು. ಲಂಚ ಪಡೆದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅಶೋಕ್ ಆಗ್ರಹಿಸಿದರು.



