ನವದೆಹಲಿ : ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ನೀಡಲಾದ ಊಟದ ಮೊಸರಿನಲ್ಲಿ ಹುಳುಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಐಆರ್ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಿದೆ. ಹಾಗೇ, ಅಡುಗೆ ಒದಗಿಸುವವರಿಗೆ 50 ಲಕ್ಷ ರೂ. ದಂಡ ವಿಧಿಸಿದೆ.
ಮಾರ್ಚ್ 15ರಂದು ಪಾಟ್ನಾ-ಟಾಟಾನಗರ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಊಟ ನೀಡಿದ ಸ್ವಲ್ಪ ಸಮಯದ ನಂತರ ಅವರು ತಮ್ಮ ಊಟದಲ್ಲಿ ಹುಳುಗಳಿವೆ ಎಂದು ಆರೋಪ ಮಾಡಿದ್ದರು. ಅಕ್ಕಪಕ್ಕದ ಸೀಟಿನವರು ಈ ಘಟನೆಯನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದರು. ಮೊಸರಿನ ಬಾಕ್ಸ್ನಿಂದ ಹುಳುಗಳು ಹರಿದಾಡಿ ರಿತೇಶ್ ಸಿಂಗ್ ಅವರ ಪ್ಲೇಟಿನಲ್ಲೂ ಬಿದ್ದಿದ್ದನ್ನು ವಿಡಿಯೋದಲ್ಲಿ ತೋರಿಸಲಾಗಿತ್ತು. ಈ ವಿಡಿಯೋ ವೈರಲ್ ಆಗಿ ರೈಲ್ವೆ ಇಲಾಖೆ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಈ ಘಟನೆಯ ಬಗ್ಗೆ ದೂರು ಸ್ವೀಕರಿಸಿದ ಕೂಡಲೇ ರೈಲ್ವೆ ಇಲಾಖೆ ತಕ್ಷಣ ಕ್ರಮ ಕೈಗೊಂಡು, ಅಡುಗೆ ಕಂಪನಿಯ ಒಪ್ಪಂದವನ್ನು ರದ್ದುಗೊಳಿಸಿ 5 ಮಿಲಿಯನ್ ದಂಡ ವಿಧಿಸಿತು. ಐಆರ್ಸಿಟಿಸಿಗೂ 1 ಮಿಲಿಯನ್ ದಂಡ ವಿಧಿಸಲಾಗಿದೆ. ಈ ಬಗ್ಗೆ ರೈಲ್ವೆ ಇಲಾಖೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
“ಮಾರ್ಚ್ 15, 2026ರಂದು ರೈಲು ಸಂಖ್ಯೆ 21896 (ಪಾಟ್ನಾ-ಟಾಟಾನಗರ ವಂದೇ ಭಾರತ್ ಎಕ್ಸ್ಪ್ರೆಸ್)ರಲ್ಲಿ ನೀಡಲಾದ ಆಹಾರದ ಗುಣಮಟ್ಟದ ಕುರಿತು ಬಂದ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದ್ದು, IRCTCಗೆ 10 ಲಕ್ಷ ರೂ. ಮತ್ತು ಅಡುಗೆ ಒದಗಿಸುವವರಿಗೆ 50 ಲಕ್ಷ ರೂ. ದಂಡ ವಿಧಿಸಲಾಗಿದೆ. ಅವರ ಒಪ್ಪಂದವನ್ನು ರದ್ದುಗೊಳಿಸಲು ಸಹ ಆದೇಶಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಗುಣಮಟ್ಟ ನಮ್ಮ ಪ್ರಮುಖ ಆದ್ಯತೆಗಳು” ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಭಾರತೀಯ ರೈಲ್ವೆ ವಕ್ತಾರರು ಕೂಡ ಈ ವಿಷಯವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ಗುಣಮಟ್ಟದ ಸೇವೆಯನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಅದರಲ್ಲೂ ವಿಶೇಷವಾಗಿ ವಂದೇ ಭಾರತ್ನಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಕರು ಉತ್ತಮ ಸೌಲಭ್ಯಗಳನ್ನು ನಿರೀಕ್ಷಿಸುವುದರಿಂದ ಉತ್ತಮ ಗುಣಮಟ್ಟದ ಸೇವೆ ಮತ್ತು ಶುಚಿತ್ವವನ್ನು ಒದಗಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.



