ಮಂಡ್ಯ : ವಿಶ್ವ ಪ್ರಸಿದ್ಧ ವೈರಮುಡಿ ಕಿರೀಟಧಾರಣಾ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಮಂಡ್ಯ ಜಿಲ್ಲಾ ಖಜಾನೆಯಿಂದ ವೈರಮುಡಿಯನ್ನು ಸರ್ಕಾರಿ ಗೌರವದೊಂದಿಗೆ ಬಿಗಿ ಭದ್ರತೆಯಲ್ಲಿ ಮೇಲುಕೊಟೆಗೆ ಕೊಂಡೊಯ್ಯಲಾಯಿತು.
ಖಜಾನೆಯಿಂದ ಜಿಲ್ಲಾಧಿಕಾರಿ ಕುಮಾರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರು ತಲೆ ಮೇಲೆ ವೈರಮುಡಿ ಆಭರಣಗಳ ಗಂಟು ಹೊತ್ತು ತಂದು ಖಜಾನೆ ದ್ವಾರದಲ್ಲಿರಿಸಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಒಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಕೆ.ಆರ್.ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವೈರಮುಡಿಗೆ ನಗರದ ಲಕ್ಷ್ಮೀ ಜನಾರ್ದನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮೇಲುಕೋಟೆಗೆ ಹೋಗುವ ದಾರಿಯುದ್ದಕ್ಕೂ ಗ್ರಾಮಗಳಲ್ಲಿ ಪೂಜೆ ಸಲ್ಲಿಸಲಾಗುವುದು. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಮೇಲುಕೊಟೆಗೆ ತಲುಪುವ ವೈರಮುಡಿಗೆ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪರ್ಕಾವಣೆ ನಡೆಸಿ ದೇವರಿಗೆ ತೊಡಿಸಲಾಗುವುದು.
ನಂತರ ರಾತ್ರಿ 8ರ ಸುಮಾರಿಗೆ ಚೆಲುವನಾರಾಯಣ ಶ್ವಾಮಿಗೆ ಕಿರೀಟಧಾರಣೆ ಮಾಡಿ, ವೈಭವದಿಂದ ವೈರಮುಡಿ ಬ್ರಹ್ಮತ್ಸೋವ ನಡೆಯಲಿದ್ದು, ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.



