ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರಗಳನ್ನು ಘೋಷಿಸಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ಸಾಹಿತಿ ರೋನ್ ರೋಚ್ ಕಾಸ್ಸಿಯಾ, ಕಲಾ ಕ್ಷೇತ್ರದಲ್ಲಿ ರಾಮದಾಸ ದತ್ತಾತ್ರೇಯ ಗುಲ್ವಾಡಿ ಹಾಗೂ ಜಾನಪದ ಕ್ಷೇತ್ರದಲ್ಲಿ ಸೈರು (ಮುರಳೀಧರ) ಪುತ್ತು ನಾಯ್ಕ ಅವರು ಗೌರವ ಪ್ರಶಸ್ತಿಗೆ ಭಾಜನರಾಗಿದ್ದು ಕಾರ್ಯಕ್ರಮವು ಎ.26ರಂದು ಸಂಜೆ 5 ಗಂಟೆಗೆ ಉಡುಪಿ ಉದ್ಯಾವರ ಚರ್ಚ್ ವಠಾರದಲ್ಲಿ ನಡೆಯಲಿದೆ ಎಂದು ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ತಿಳಿಸಿದರು.
ಅವರು ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವ 79 ವರ್ಷದ ರೋನ್ ರೋಚ್ ಕಾಸ್ಸಿಯಾ ಅವರು 12 ಪತ್ತೇದಾರಿ ಕಾದಂಬರಿಗಳು ಸೇರಿದಂತೆ ನೂರಾರು ಸಣ್ಣಕಥೆಗಳನ್ನು ರಚಿಸಿದ್ದಾರೆ. ಕಲಾ ವಿಭಾಗದ ಪ್ರಶಸ್ತಿ ಪುರಸ್ಕೃತ 89 ವರ್ಷದ ರಾಮದಾಸ ದತ್ತಾತ್ರೇಯ ಗುಲ್ಮಾಡಿ ಅವರು ರಂಗಭೂಮಿಯಲ್ಲಿ ಎಂಟು ದಶಕಗಳ ಸುದೀರ್ಘ ಅನುಭವ ಹೊಂದಿದ್ದು, ‘ಸಾಂಸ್ಕೃತಿಕ ರಾಯಭಾರಿ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಮುರಳೀಧರ ಪುತ್ತು ನಾಯ್ಕ ಅವರ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ ಎಂದರು.
ಇದೇ ವೇಳೆ 2025ನೇ ಸಾಲಿನ ಪುಸ್ತಕ ಪುರಸ್ಕಾರಗಳನ್ನೂ ಪ್ರಕಟಿಸಲಾಗಿದ್ದು, ಕವನ ವಿಭಾಗದಲ್ಲಿ ಆಂಡೋ ಎಲ್. ಡಿಕುನ್ನಾ ಅವರ ‘ಉಜ್ವಾಡಾಚೆ ವೆಂಗೆಂತ್’, ಲೇಖನ ವಿಭಾಗದಲ್ಲಿ ರೋಷನ್ ಮೆಲ್ಲಿ ಸಿಕ್ಕೇರಾ ಅವರ ‘ಕೊಂಕ್ಷಿ ಸರ್ಕಸ್’ ಹಾಗೂ ಸಣ್ಣಕಥೆ ವಿಭಾಗದಲ್ಲಿ ರಿಚರ್ಡ್ ಅಲ್ವಾರಿಸ್ ಅವರ ‘ಫಿತುರಿ’ ಕೃತಿಗಳು ಆಯ್ಕೆಯಾಗಿವೆ ಎಂದರು.
ಪುರಸ್ಕೃತರೆಲ್ಲರೂ ಕೊಂಕಣಿ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ದಶಕಗಳಿಂದ ಮಹತ್ವದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಸಮಾರಂಭದ ಅಂಗವಾಗಿ ಹಾವಿಕ್, ಸಿದ್ದಿ ಮತ್ತು ಕುಡುಬಿ ಸಮುದಾಯದ ಸಾಂಸ್ಕೃತಿಕ ನೃತ್ಯ ವೈವಿಧ್ಯಗಳು ಹಾಗೂ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್. ತಂಗಡಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಖಾರ್ವಿ, ಸಿದ್ದಿ, ಕುಡುಬಿ ಸಮುದಾಯದ ಸಾಂಸ್ಕೃತಿಕ ನೃತ್ಯ ಬ್ರಾಸ್ ಬ್ಯಾಂಡ್ ಹಾಗೂ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನವೀನ್ ಲಬೋ, ರೊನಾಲ್ಡ್ ಕ್ರಾಸ್ತಾ, ಇಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟ
RELATED ARTICLES



