ಮೈಸೂರು : ನಗರ ಪಾಲಿಕೆ ನೀರಿನ ದರ ಏರಿಕೆ ವಿಚಾರದಲ್ಲಿ ಅನಗತ್ಯ ರಾಜಕೀಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಲಕ್ಷ್ಮಣ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಲೀಟರ್ ಬಾಟಲಿ ನೀರಿಗೆ ಜನರು ₹20 ಕೊಡುತ್ತಾರೆ. ಆದರೆ ಮನೆಗೆ ಬರುತ್ತಿರುವ ಟ್ರೀಟೆಡ್ ನೀರಿನ ವೆಚ್ಚ ಸಾವಿರ ಲೀಟರ್ಗೆ ಕೇವಲ ₹5 ಮಾತ್ರ. ಅಂದರೆ ಒಂದು ಲೀಟರ್ಗೆ ಅರ್ಧ ಪೈಸೆಯಷ್ಟೇ ವೆಚ್ಚ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ 0.15 ಪೈಸೆ ಹೆಚ್ಚಳ ಮಾಡಿರುವುದನ್ನು ದೊಡ್ಡ ವಿಷಯವಾಗಿ ತೋರಿಸುವುದು ತಪ್ಪು ಎಂದು ಅವರು ಹೇಳಿದರು.
ಕಳೆದ 15 ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿರಲಿಲ್ಲ. ಇದೀಗ ಮಾಡಿದ ಏರಿಕೆಯಿಂದ ಕಾರ್ಪೋರೇಷನ್ಗೆ ಬರೋದು ಕೇವಲ ₹35 ಲಕ್ಷ ಮಾತ್ರ. ಆದರೆ ಇದನ್ನು ಶೇ.30ರಷ್ಟು ಏರಿಕೆ ಎಂದು ಹೇಳುವುದು ಸಂಪೂರ್ಣ ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಿದರು.
ಟೋಲ್ ದರವನ್ನು ಪ್ರತಿವರ್ಷ ಹೆಚ್ಚಿಸಲಾಗುತ್ತದೆ. ಅದಕ್ಕೆ ವಿರೋಧವಾಗಿ ಯಾರು ಧ್ವನಿ ಎತ್ತುವುದಿಲ್ಲ. ಆದರೆ ನೀರಿನ ದರದಲ್ಲಿ ಅಲ್ಪ ಪ್ರಮಾಣದ ಏರಿಕೆಗೆ ಮಾತ್ರ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.
ಬಿಜೆಪಿ ನಾಯಕರು ರೈತರ ಸಮಸ್ಯೆಗಳು, ತಂಬಾಕು ಬೆಳೆಗಾರರ ಕಷ್ಟಗಳ ಬಗ್ಗೆ ಮಾತಾಡುವುದಿಲ್ಲ. ಆದರೆ ಅರ್ಧ ಪೈಸೆ ಏರಿಕೆಗೆ ಮಾತ್ರ ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನೂ, ಕೇಂದ್ರ ಸಚಿವ ಪಿಯುಷ್ ಗೋಯಲ್ ಅವರನ್ನು ಭೇಟಿ ಮಾಡಿ ಫೋಟೋ ತೆಗೆಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆ ಭೇಟಿಯ ಬಳಿಕವೂ ಪರಿಸ್ಥಿತಿ ಇನ್ನಷ್ಟು ಕೆಡುತ್ತಿದೆ. ಅವರು ಭೇಟಿ ವೇಳೆ ಏನು ಚರ್ಚಿಸಿದರು ಎಂಬುದೇ ಸ್ಪಷ್ಟವಾಗಿಲ್ಲ ಎಂದು ಜೆಡಿಎಸ್ ನಾಯಕರನ್ನೂ ಲಕ್ಷ್ಮಣ್ ಟೀಕಿಸಿದರು.
ಒಟ್ಟಿನಲ್ಲಿ, “ಜನರ ಗಮನ ಬೇರೆಡೆಗೆ ತಿರುಗಿಸಲು ನೀರಿನ ದರ ಏರಿಕೆ ವಿಷಯವನ್ನು ರಾಜಕೀಯವಾಗಿ ಬಳಸಲಾಗುತ್ತಿದೆ” ಎಂದು ಲಕ್ಷ್ಮಣ್ ಕಿಡಿಕಾರಿದರು.



