ಟೆಹ್ರಾನ್ : ಇಸ್ರೇಲ್ ಮತ್ತು ಲೆಬನಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಇರಾನ್ನ ನೂತನ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಪ್ರಪಂಚದ ಗಮನ ಸೆಳೆಯುವಂತಹ ಲಿಖಿತ ಸಂದೇಶವೊಂದನ್ನು ರವಾನಿಸಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮದ ಬಗ್ಗೆ ಮಾತುಕತೆ ನಡೆಯುತ್ತಿರುವ ಹೊತ್ತಲ್ಲೇ, “ನಾವು ಯುದ್ಧವನ್ನು ಬಯಸುವುದಿಲ್ಲ, ಆದರೆ ನಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಫೆಬ್ರವರಿ 28 ರಂದು ಇರಾನ್ ನ ಮಾಜಿ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾದ ನಂತರ, ಅವರ ಪುತ್ರ 56 ವರ್ಷದ ಮೊಜ್ತಬಾ ಖಮೇನಿ ಅಧಿಕಾರ ವಹಿಸಿಕೊಂಡಿದ್ದರು. ಅಂದಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಅವರು, ಇದೀಗ ಸರ್ಕಾರಿ ದೂರದರ್ಶನದ ಮೂಲಕ ಲಿಖಿತ ಹೇಳಿಕೆ ನೀಡಿದ್ದಾರೆ.
ಯುದ್ಧದ ಬಗ್ಗೆ ನಿಲುವು : “ನಾವು ಯುದ್ಧವನ್ನು ಎಂದಿಗೂ ಬಯಸಿಲ್ಲ ಮತ್ತು ಈಗಲೂ ಬಯಸುವುದಿಲ್ಲ. ಆದರೆ ಯಾವುದೇ ಪರಿಸ್ಥಿತಿಯಲ್ಲೂ ರಾಷ್ಟ್ರದ ಹಕ್ಕುಗಳ ರಕ್ಷಣೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಖಮೇನಿ ಹೇಳಿದ್ದಾರೆ.
ಸಾರ್ವಜನಿಕ ಹೋರಾಟಕ್ಕೆ ಕರೆ : ಕದನ ವಿರಾಮ ಘೋಷಣೆಯಾದ ಮಾತ್ರಕ್ಕೆ ಜನರು ಬೀದಿಗೆ ಇಳಿದು ಹೋರಾಡುವುದನ್ನು ನಿಲ್ಲಿಸಬಾರದು. “ಜನರು ಒಗ್ಗಟ್ಟಾಗಿ ಬೀದಿಗಿಳಿದು ಬೇಡಿಕೆ ಮಂಡಿಸಿದಾಗ, ದೊಡ್ಡ ಶಕ್ತಿಗಳು ಕೂಡ ತಮ್ಮ ನಿರ್ಧಾರವನ್ನು ಬದಲಿಸಬೇಕಾಗುತ್ತದೆ” ಎಂದು ಅವರು ಇರಾನಿಯನ್ನರಿಗೆ ಕರೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿಯ ಮೇಲೆ ಕಣ್ಣು: ಜಗತ್ತಿನ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ನಿರ್ವಹಿಸುವ ರೀತಿಯನ್ನು ಇರಾನ್ ಸಂಪೂರ್ಣವಾಗಿ ಬದಲಿಸಲಿದೆ ಮತ್ತು ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಇಸ್ರೇಲ್-ಲೆಬನಾನ್ ಸಂಘರ್ಷ: ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಲೆಬನಾನ್ ಮೇಲೆ ದಾಳಿ ಮುಂದುವರಿಸುವುದಾಗಿ ಘೋಷಿಸಿರುವ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸುತ್ತಿದೆ.



