ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಜನರಿಂದ ಹಣ ಲೂಟಿ ಮಾಡಲು ‘ಡಿಜಿಟಲ್ ಅರೆಸ್ಟ್’ ಎಂಬ ಅಸ್ತ್ರವನ್ನು ಬಳಸುತ್ತಿದ್ದಾರೆ. ದೇಶಾದ್ಯಂತ ಅನೇಕ ವಿದ್ಯಾವಂತರೂ ಸೇರಿದಂತೆ ಅನೇಕರು ಈ ಮಾಯಜಾಲಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಉತ್ತರ ಪ್ರದೇಶದ ಬರೇಲಿಯ ಎಂಟನೇ ತರಗತಿಯ ಬಾಲಕನೊಬ್ಬ ತನ್ನ ಬುದ್ದಿವಂತಿಕೆಯಿಂದ ಪೋಷಕರನ್ನು ಈ ಸೈಬರ್ ಕದೀಮರಿಂದ ಪಾರಿ ಮಾಡಿದ್ದಾನೆ.
ಅಸಲಿಗೆ ನಡೆದಿದ್ದೇನು ?
ಬರೇಲಿಯ ಉದ್ಯಮಿ ಸಂಜಯ್ ಸಸ್ಸೇನಾ ಅವರ ಪತ್ನಿಗೆ ಅಪರಿಚಿತ ನಂಬರ್ನಿಂದ ಫೋನ್ ಬಂದಿತ್ತು. ತಾವು ತನಿಖಾ ಸಂಸ್ಥೆಯಿಂದ ಮಾತನಾಡುತ್ತಿರುವುದಾಗಿ ಹೇಳಿದ ಸೈಬರ್ ಕಿಡಿಗೇಡಿಗಳು, ನಿಮ್ಮ ಪತಿಗೆ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಸಂಬಂಧವಿದೆ ಮತ್ತು ಅವರು ಕೋಟ್ಯಂತರ ರೂಪಾಯಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೆದರಿಸಿದ್ದಾರೆ. ನಾವು ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ, ಕ್ಯಾಮೆರಾ ಮುಂದೆ ಬರಬೇಕು ಮತ್ತು ಮನೆ ಬಿಟ್ಟು ಹೊರಗೆ ಹೋಗಬಾರದು ಎಂದು ಸೈಬರ್ ಕದೀಮರು ದಂಪತಿಗಳಿಗೆ ಶರತ್ತು ಹಾಕಿದ್ದಾರೆ
ಸುಮಾರು 10 ಗಂಟೆಗಳ ಕಾಲ ವಿಡಿಯೋ ಕಾಲ್ನಲ್ಲಿದ್ದ ವಂಚಕರು, ನಕಲಿ ಅರೆಸ್ಟ್ ವಾರೆಂಟ್ ತೋರಿಸಿ ದಂಪತಿಗಳನ್ನು ನಡುಗಿಸಿದ್ದಾರೆ. ಊಟ ಮಾಡಿದರೂ, ನಿದ್ದೆ ಮಾಡಿದರೂ ಕ್ಯಾಮೆರಾ ಮುಂದೆಯೇ ಇರಬೇಕು ಎಂದು ಮಾನಸಿಕವಾಗಿ ಹಿಂಸಿಸಿದ್ದಾರೆ. ಭಯಗೊಂಡ ದಂಪತಿಗಳು ತಮ್ಮ ಬ್ಯಾಂಕ್ ವಿವರಗಳನ್ನು ಅವರಿಗೆ ನೀಡಲು ಒಪ್ಪಿದ್ದಾರೆ.
ತನ್ನ ಪೋಷಕರು ಭಯಬಿದ್ದಿರುವುದನ್ನು ಗಮನಿಸಿದ ಮಗ ತನ್ಮಯ್, ಇದು ‘ಡಿಜಿಟಲ್ ಅರೆಸ್ಟ್’ ಸ್ಕ್ಯಾಮ್ ಎಂದು ತಕ್ಷಣ ಗುರುತಿಸಿದ್ದಾನೆ ಜೊತೆಗೆ, ತನ್ನ ಶಾಲೆಯಲ್ಲಿ ನಡೆದಿದ್ದ ‘ಸೈಬರ್ ಸೆಕ್ಯೂರಿಟಿ’ ಜಾಗೃತಿ ಶಿಬಿರದಿಂದಾಗಿ ಅವನಿಗೆ ಇದರ ಬಗ್ಗೆ ಅರಿವಿತ್ತು.
ತನ್ಮಯ್ ವಿಳಂಬ ಮಾಡದೆ ತನ್ನ ಮೊಬೈಲ್ನಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಳಿಕ, ಪೋಷಕರ ಫೋನ್ ಅನ್ನು ತಕ್ಷಣವೇ ‘ಏರೋಪ್ಲೇನ್ ಮೂಡ್ಗೆ ಹಾಕಿದ್ದಾನೆ. ಇದರಿಂದ ವಂಚಕರೊಂದಿಗಿನ ವಿಡಿಯೋ ಕಾಲ್ ಸಂಪರ್ಕ ಕಡಿತಗೊಂಡಿದೆ.
ಬಾಲಕನ ಸಮಯಪ್ರಜ್ಞೆಯಿಂದಾಗಿ ಲಕ್ಷಾಂತರ ರೂಪಾಯಿ ಉಳಿತಾಯವಾಗಿದೆ. ಮರುದಿನ ಪ್ರೇಮ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಯಿತು. ಈ ಪ್ರಕರನ ಕುರಿತು ಅಲ್ಲಿನ ಎಸ್ಪಿ ಮನೀಶ್ ಪರೀಶ್ ಮಾತನಾಡಿ, ಕಾನೂನಿನಲ್ಲಿ ‘ಡಿಜಿಟಲ್ ಅರೆಸ್ಟ್’ ಎಂಬ ಪದ್ಧತಿಯೇ ಇಲ್ಲ. ಯಾವುದೇ ತನಿಖಾ ಸಂಸ್ಥೆಯು ವಿಡಿಯೋ ಕಾಲ್ ಮಾಡಿ ಬಂಧಿಸುವುದಿಲ್ಲ. ಇಂತಹ ಕರೆಗಳು ಬಂದರೆ ಹೆದರದೆ ಪೊಲೀಸರಿಗೆ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ.



