ಮೈಸೂರು : ಸರ್ಕಾರ ಬಂದಾಗಿನಿಂದ ಒಂಭತ್ತು ಪ್ರಕರಣ ಎಸ್ ಐಟಿಗೆ ನೀಡಿದ್ದು, ಇದರಲ್ಲಿ ಒಂದಾದ ಬಿಟ್ ಕಾಯಿನ್ ಪ್ರಕರಣವನ್ನು ವರದಿ ಸಲ್ಲಿಸಿ ವರ್ಷವಾದರೂ ಎಫ್ಐಆರ್ ಯಾಕೆ ದಾಖಲಿಸಿಲ್ಲ. ಎಸ್ಐಟಿ ಸಲ್ಲಿರುವ ವರದಿಯನ್ನು ಸರ್ಕಾರ ಬಹಿರಂಗ ಪಡಿಸಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಬಂದು ಮೂರು ವರ್ಷ ಆಯಿತು. ಒಂಭತ್ತು ಪ್ರಕರಣಗಳ ತನಿಖೆಗೆ ಎಸ್ ಐಟಿಗೆ ನೀಡಿದೆ. ಕೊರೊನಾ ಶೇ.40ರಷ್ಟು ಪರ್ಸೆಂಟ್ ಲಂಚ ಎಲ್ಲವೂ ವರದಿಯಾಗಿವೆ. 8 ಪ್ರಕರಣ ಚಾರ್ಜ್ ಶೀಟ್ ಆಗಿದ್ದು, ಒಂಭತ್ತನೆಯ ಪ್ರಕರಣ ಬಿಟ್ ಕಾಯಿನ್ ಪ್ರಕರಣ ಆಗಿದೆ. ಈಗ ಬಿಟ್ ಕಾಯಿನ್ ಬಗ್ಗೆ ಇ.ಡಿಗೆ ಮಾಹಿತಿ ಸಿಕ್ಕಿ 100ಕ್ಕೂ ಹೆಚ್ಚು ಅಧಿಕಾರಿಗಳು ಅನೇಕ ಕಡೆ ದಾಳಿ ಮಾಡಿದ್ದಾರೆ. ಶಾಸಕರ ಪುತ್ರರ ಮನೆ ಮೇಲೆ ದಾಳಿ ಮಾಡಿದ್ದಾರೆ. ಶ್ರೀಕಿ ಈ ಪ್ರಕರಣದ ಪ್ರಮುಖ ಕಿಂಗ್ ಪಿನ್ ಆಗಿದ್ದಾರೆ. ಅವರು ಮನೆ ಮೇಲೂ ದಾಳಿ ಮಾಡಿದೆ. ಬಿಟ್ ಕಾಯಿನ್ ವರದಿ ಬಂದು ವರ್ಷ ಆಗಿದೆ. ಎಫ್ ಐಆರ್ ಯಾಕೆ ಮಾಡುತ್ತಿಲ್ಲ. ಈ ಪ್ರಕರಣದಲ್ಲಿ ಹೆಚ್ಚಾಗಿ ಕಾಂಗ್ರೆಸ್ ಇರುವ ಕಾರಣಕ್ಕೆ ಪ್ರಕರಣ ದಾಖಲಿಸುತ್ತಿಲ್ಲವೆ ಎಂದು ಹೇಳಿದರು.
2016-17ರಲ್ಲಿ ಸೆಮಿನಾರ್ ನಲ್ಲಿ ಬಹುಮುಖ್ಯವಾಗಿ ಬಿಟ್ ಕಾಯಿನ್ ಬಗ್ಗೆ ವಿಚಾರ ಸಂಕಿರಣವನ್ನು ನಡೆಸಿದರು. ಹೀಗಾಗಿ ಅಂದಿನ ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ಸಂಪರ್ಕವೂ ಸೇರಿ ಎಲ್ಲಾ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕಿದೆ. ಆಗ ಮಾತ್ರವೇ ಬಿಟ್ ಕಾಯಿನ್ ನಲ್ಲಿ ಯಾರೆಲ್ಲಾ ಇದ್ದಾರೆಂಬ ಮಾಹಿತಿ ಹೊರಬರಲಿದೆ. ಸದ್ಯ ಎಸ್ ಐಟಿ ಮಾಡಿರುವ ವರದಿ ಬಹಿರಂಗ ಮಾಡಬೇಕೆಂದು ಆಗ್ರಹಿಸಿದರು.
ಮುಗಿದ ಕಾಂಗ್ರೆಸ್ ಆಯುಸ್ಸು
ಕಾಂಗ್ರೆಸ್ ನ ಆಯಸ್ಸು ಮುಗಿದಿದೆ. ಈಗಾಗಲೇ ದಲಿತರನ್ನು ಮುಗಿಸಿ ಆ ಸಮುದಾಯ ಬಿಜೆಪಿಯತ್ತ ಮುಖ ಮಾಡಿದೆ. ಈಗ ಮುಸಲ್ಮಾನರು ಕಾಂಗ್ರೆಸ್ ತಿರಸ್ಕಾರ ಮಾಡಿ ಹೊರಗೆ ಬರುತ್ತಿದ್ದಾರೆ. ಮುಸಲ್ಮಾನ್ ನಾಯಕರ ಬೆಂಬಲಿಗರಾಗಿ ಸಮುದಾಯ ಇರಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಾ ನಾಶದತ್ತ ಕಾಂಗ್ರೆಸ್ ಸಾಗಿದೆ ಎಂದರು.
ಶೇ.೫೦ರಷ್ಟು ಕ್ಷೇತ್ರ ಹೆಚ್ಚಳ
ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ ಮಾಡಿಲ್ಲ. ಬದಲಿಗೆ ಈಗಿರುವ 543ರಲ್ಲಿ ಶೇ.50ರಷ್ಟು ಹೆಚ್ಚಳ 272 ಹೆಚ್ಚಿಸಿ 815 ಕ್ಷೇತ್ರ ಮಾಡಿದ್ದಾರೆ. ಇದರಿಂದ ರಾಜ್ಯದಲ್ಲಿರುವ 20 ಕ್ಷೇತ್ರ 40 ಕ್ಷೇತ್ರಕ್ಕೆ ಏರಿಕೆ ಮಾಡಿದ್ದಾರೆ. ಇದರಿಂದ ದಕ್ಷಿಣಾ ಭಾರತಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ. ಬಿಜೆಪಿಯ ಎಲ್ಲಾ ಯೋಜನೆಯನ್ನು ವಿರೋಧಿಸುವುದೇ ಕಾಂಗ್ರೆಸ್ ಉದ್ದೇಶವಾಗಿದೆ. ಇನ್ನೂ ಮಹಿಳೆಯರಿಗೆ ಮೀಸಲಾತಿಯನ್ನು ಹೆಚ್ಚಿಸಿ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಕ್ಷೇತ್ರ ಹೆಚ್ಚಳ ಮಾಡಲಾಗಿದೆ. 543 ಕ್ಷೇತ್ರದಲ್ಲಿ ಮಹಿಳಾ ಮೀಸಲು ಶೇ.33 ರಷ್ಟು 183 ಸೀಟು ಕಸಿದುಕೊಳ್ಳುತ್ತವೆ. ಆಗ ಎಲ್ಲರಿಗೂ ಆಡಳಿತ ಮಾಡಲು ಅನೂಕೂಲ ಆಗಲಿದೆ ಎಂದರು.
ಇದೇ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 198 ವಾರ್ಡ್ ಇದ್ದ ಬಿಬಿಎಂಪಿಯನ್ನು 5 ಭಾಗವಾಗಿ ಜಿಬಿಎ 25ರಿಂದ 30 ಸಾವಿರಕ್ಕೆ ಒಂದು ವಾರ್ಡ್ ಆಗಿ ವಿಂಗಡಿಸಿದ್ದಾರೆ. ಆಡಳಿತ ವಿಕೇಂದ್ರಿಕರಣಕ್ಕಾಗಿ ಮಾಡಿದ್ದಾರೆ. ಅದೇ ರೀತಿ ಲೋಕಸಭೆಯಲ್ಲೂ ಮಾಡಲಾಗಿದೆ ಎಂದು ಹೇಳಿದರು. ಶಾಸಕ ಶ್ರೀವತ್ಸ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಶಾಸಕ ಎನ್.ಮಹೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಂ.ಸುಬ್ಬಣ್ಣ, ಮಾಜಿ ಮೇಯರ್ ಶಿವಕುಮಾರ್, ಮಾಜಿ ಉಪಮೇಯರ್ ಶೈಲೇಂದ್ರ, ಬಿಜೆಪಿ ಮುಖಂಡ ಮಹದೇವಯ್ಯ, ನಗರಪಾಲಿಕೆ ಮಾಜಿ ಸದಸ್ಯ ಅಶ್ವಿನಿ ಶರತ್ ಮಾದ್ಯಮ ವಕ್ತಾರ ಮಹೇಶ್ ರಾಜೇ ಅರಸ್ ಇನ್ನಿತರರು ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ಹೋರಾಟ
ಮೋದಿಯನ್ನು ಭಯೋತ್ಪಾದಕ ಎಂದಿರುವ ಖರ್ಗೆ ಹೇಳಿಕೆ ಖಂಡನೀಯ. ಕಾಂಗ್ರೆಸ್ ಪಕ್ಷ ಟೆರರಿಸ್ಟ್ ಪಕ್ಷ ಆಗಿದೆ. ಅಂತಹವರಿಂದ ಇಂತಹ ಹೇಳಿಕೆ ಬರುತ್ತಿದೆ. ಮೈಸೂರಿನ ಉದಯಗಿರಿ ಠಾಣೆಗೆ ಸಿಬ್ಬಂದಿ ನೇಮಕ ವಿಚಾರದಲ್ಲಿ ಸರ್ಕಾರದ ನಿರಾಸಕ್ತಿ ಹಾಗೂ ಸ್ವಪಕ್ಷದ ಶಾಸಕ ಪತ್ರ ವಿಚಾರವಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಹೋರಾಟ ಮಾಡುವುದಾಗಿ ನಾರಾಯಣಸ್ವಾಮಿ ಹೇಳಿದರು.



