ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ಮಹತ್ವದ ಘೋಷಣೆ ಮಾಡಿದೆ.
ಇಂದು (ಮೇ 4) ಫಲಿತಾಂಶ ಪ್ರಕಟವಾದ ನಂತರ ರಾಜ್ಯಾದ್ಯಂತ ಯಾವುದೇ ರೀತಿಯ ವಿಜಯೋತ್ಸವ ರ್ಯಾಲಿಗಳು ಅಥವಾ ಮೆರವಣಿಗೆಗಳನ್ನು ನಡೆಸಲು ಅನುಮತಿ ಇಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.
ಚುನಾವಣಾ ಫಲಿತಾಂಶದ ನಂತರ ಉಂಟಾಗಬಹುದಾದ ಭಾವನಾತ್ಮಕ ಉದ್ವೇಗಗಳಿಂದಾಗಿ ಯಾವುದೇ ಹಿಂಸಾತ್ಮಕ ಘಟನೆಗಳು ನಡೆಯದಂತೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಹೀಗಾಗಿ ಗೆದ್ದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಭಾರಿ ಜನಸಮೂಹವನ್ನು ಸೇರಿಸಿ ಬೀದಿಗಿಳಿಯಬಾರದು ಎಂದು ಆದೇಶಿಸಲಾಗಿದೆ. ವಿಜಯ ಸಾಧಿಸಿದ ಅಭ್ಯರ್ಥಿಗಳು ತಮ್ಮೊಂದಿಗೆ ಕೇವಲ ಇಬ್ಬರು ವ್ಯಕ್ತಿಗಳನ್ನು ಮಾತ್ರ ಕರೆತಂದು ಚುನಾವಣಾ ಅಧಿಕಾರಿಯಿಂದ ಗೆಲುವಿನ ಪ್ರಮಾಣಪತ್ರವನ್ನು ಪಡೆಯಬೇಕು ಎಂಬ ನಿಯಮವನ್ನ ಜಾರಿಗೊಳಿಸಿದೆ.
ಹಳೆಯ ಚುನಾವಣಾ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿಯ ಮತ ಎಣಿಕೆ ಮುಗಿದ ನಂತರವೂ ಬಂಗಾಳದಾದ್ಯಂತ ಕೇಂದ್ರ ಭದ್ರತಾ ಪಡೆಗಳ ಗಸ್ತನ್ನು ಮುಂದುವರಿಸಲಾಗುತ್ತದೆ. ಈ ನಿಯಮಗಳನ್ನು ಯಾರಾದರೂ ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸರಿಗೆ ಚುನಾವಣಾ ಆಯೋಗವು ಸೂಚಿಸಿದೆ.
ಪಶ್ಚಿಮ ಬಂಗಾಳದಲ್ಲಿ ಮತದಾನದ ಸಮಯದಲ್ಲಿ ಅಲ್ಲಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿರುವುದು ಮತ್ತು ಇತ್ತೀಚೆಗೆ ‘ಫಾಲ್ಟಾ’ ವಿಧಾನಸಭಾ ಕ್ಷೇತ್ರದಲ್ಲಿ ಇವಿಎಂ ತಿರುಚಿದ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಆಯೋಗದ ಈ ನಿರ್ಧಾರವು ಅತ್ಯಂತ ಮಹತ್ವ ಪಡೆದುಕೊಂಡಿದೆ. ಕೇವಲ ಪಶ್ಚಿಮ ಬಂಗಾಳ ಮಾತ್ರವಲ್ಲದೆ, ಕೇರಳ ಮತ್ತು ತಮಿಳುನಾಡಿನಲ್ಲೂ ಇಂತಹ ಸೀಮಿತ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಂಯಮ ಕಾಯ್ದುಕೊಳ್ಳಬೇಕು ಹಾಗೂ ಫಲಿತಾಂಶಗಳನ್ನು ಶಾಂತಿಯುತವಾಗಿ ಸ್ವೀಕರಿಸಬೇಕು ಎಂದು ಚುನಾವಣಾ ಆಯೋಗವು ಮನವಿ ಮಾಡಿದೆ.



