ಗೌರಿಬಿದನೂರು : ತಾಲೂಕಿನ ಮೈಲಗಾನಹಳ್ಳಿ ಗ್ರಾಮದ ಜಟಲಿಂಗೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಿಸಲಿರುವ ಸಮುದಾಯ ಭವನಕ್ಕೆ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಧನ ಸಹಾಯ ಮಾಡುವುದಾಗಿ ಸಂಸದ ಡಾ.ಕೆ.ಸುಧಾಕರ್ ಭರವಸೆ ನೀಡಿದರು.
ತೊಂಡೇಬಾವಿ ಹೋಬಳಿಯ ಮೈಲಗಾನಹಳ್ಳಿಯ ಜಟಲಿಂಗೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ನರಸಮ್ಮದೇವಿ ಮತ್ತು ಮಹಾಗಣಪತಿ ಪ್ರತಿಷ್ಠಾಪನಾ 18ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಸುಮಾರು 400 ವರ್ಷಗಳಷ್ಟು ಪುರಾತನವಾದ ದೇವಾಲಯದ ಈ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲು ಸಂತೋಷವಾಗುತ್ತಿದೆ.
ಇದು ಮಹಿಮಾನ್ವಿತವಾದ ಸ್ಥಳ ಸಹ ಆಗಿದ್ದು, ಮತ್ತಷ್ಟು ಅಭಿವೃದ್ಧಿಯಾಗಿ ಈ ಕ್ಷೇತ್ರದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಂತಾಗಬೇಕಾಗಿದೆ. ಆದ್ದರಿಂದಲೇ ಇದರ ಅಭಿವೃದ್ಧಿಗೆ ಹೆಗಲೆಣೆಯಾಗಿರುತ್ತೇನೆ ಎಂದರು.
ಅಲ್ಲದೆ ಮರಾಠ ಸಮುದಾಯದ ಜನರು ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿದ್ದರೂ ದೇಶ ಭಕ್ತಿ, ನಿಷ್ಠೆ, ಪ್ರಾಮಾಣಿಕತೆಗಳಲ್ಲಿ ಮೊದಲಿಗರಾಗಿದದು, ಈ ಸಮುದಾಯದ ಧ್ರುವತಾರೆ ಶಿವಾಜಿ ಮಹಾರಾಜರು ಧೈರ್ಯ ಸಾಹಸಗಳಿಗೆ ಹೆಸರಾಗಿದ್ದರು. ಸೈನ್ಯದ ಸಂಖ್ಯೆ ಕಡಿಮೆ ಇದ್ದರೂ ಧೈರ್ಯವನ್ನೇ ಸೈನ್ಯವಾಗಿಸಿಕೊಂಡು ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಧೀರ ಶಿವಾಜಿ ಎಂದು ಬಣ್ಣಿಸಿದರು.
ಮರಾಠ ಸಮುದಾಯದ ಜೊತೆ ನಾನು ಇದ್ದೇನೆ. ಈ ಸಮುದಾಯ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಅಗತ್ಯವಾದ ನೆರವು ನೀಡುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರಮೇಶರಾವ್, ಹೆಚ್.ಎಸ್.ಮುರಳಿಧರ, ವೇಣುಮಾದವ, ಮಧುಸೂದನರೆಡ್ಡಿ, ದೇವಾಲಯದ ಟ್ರಸ್ಟ್ನ ಜಗನ್ನಾಥರಾವ್ ಶೇಳ್ಕೆ, ಜೈಮುನಿರಾವ್ ಶೇಳ್ಳೆ ಹಾಗೂ ಇನ್ನಿತರರು ಭಾಗವಹಿಸಿದ್ದರು.



