ಬೆಂಗಳೂರು : ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಕ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಪಕ್ಷದಲ್ಲಿ ಆಂತರಿಕ ಸಮಸ್ಯೆಗಳು ಹೆಚ್ಚಾಗಿವೆ ಎಂದಿದ್ದಾರೆ. ಪಕ್ಷದಲ್ಲಿ ವ್ಯವಸ್ಥಿತವಾಗಿ ಕೆಲಸ ನಡೆಯುತ್ತಿಲ್ಲ, ವ್ಯಕ್ತಿ ಪೂಜೆ ಅತಿಯಾಗಿದೆ ಹಾಗೂ ಪಕ್ಷಕ್ಕಿಂತ ವ್ಯಕ್ತಿ ವೈಭವೀಕರಣ ಹೆಚ್ಚಾಗಿದೆ ಎಂದು ಅವರು ಟೀಕಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಅನ್ನು ಬ್ಲಾಕ್ಮೇಲ್ ಮಾಡುವಂತಹ ತಂತ್ರಗಳು ನಡೆಯುತ್ತಿವೆ. ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ ನಡೆದ ಸ್ವಾಮೀಜಿಗಳ ಮೆರವಣಿಗೆ ಇಂತಹ ಕಾರ್ಯತಂತ್ರದ ಭಾಗವಾಗಿತ್ತು. ಹೈಕಮಾಂಡ್ಗೆ ಈ ಕುರಿತು ಮನವರಿಕೆಯಾಗಿದೆ ಎಂದು ಯತ್ನಾಳ್ ಹೇಳಿದರು.
ಒಂದು ಕುಟುಂಬವು ತಮ್ಮ ಶಕ್ತಿ ದೊಡ್ಡದಿದೆ ಎಂದು ಹೇಳಿ ಪಕ್ಷವನ್ನು ಒತ್ತಾಯಿಸುವ ಪ್ರಯತ್ನ ಮಾಡಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಅಭಿಮಾನೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪರೋಕ್ಷವಾಗಿ ಪಕ್ಷ ಒಂದು ಕುಟುಂಬದ ಹಿಡಿತದಿಂದ ಮುಕ್ತವಾಗುತ್ತಿದೆ ಎಂಬ ಸುಳಿವು ನೀಡಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ಅಲ್ಲದೆ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ತೆಗೆದುಕೊಂಡ ಆ ಕುಟುಂಬದವರ (ಯಡಿಯೂರಪ್ಪರನ್ನು ಉದ್ದೇಶಿಸಿ) ಕೊನೆಯ ಫೋಟೋ ಇದನ್ನೇ ಸೂಚಿಸುತ್ತದೆ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.



