ಚಾಮರಾಜನಗರ : ತಾಲೂಕಿನ ಕರಡಿಮೋಳೆ ಗ್ರಾಮದ ನಿವಾಸಿಯೊಬ್ಬರು ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದು, ಇವರ ಪತ್ತೆಗಾಗಿ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.
ಮಹೇಶ್ (33) ನಾಪತ್ತೆಯಾಗಿರುವ ವ್ಯಕ್ತಿ. ಕರಡಿಮೋಳೆ ಗ್ರಾಮದ ಲೇಟ್ ಸಿದ್ದಮಲ್ಲಶೆಟ್ಟಿ ಅವರ ಪುತ್ರರಾಗಿದ್ದು, ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿಯಿಂದ ವಿಚ್ಛೇದನ ಪಡೆದ ನಂತರ ಕೆಲಕಾಲ ಮನೆ ಬಿಟ್ಟು ಹೋಗಿದ್ದ ಮಹೇಶ್, ತದನಂತರ ಊರಿಗೆ ಮರಳಿ ಒಂದು ತಿಂಗಳು ಇದ್ದರು. ಬಳಿಕ, ಎರಡು ವರ್ಷಗಳ ಹಿಂದೆ ಕೆಲಸದ ನಿಮಿತ್ತ ತಮಿಳುನಾಡಿಗೆ ತೆರಳುವುದಾಗಿ ಮನೆಯವರಿಗೆ ತಿಳಿಸಿ ಹೋದವರು, ಇಲ್ಲಿಯವರೆಗೆ ವಾಪಸ್ ಬಂದಿಲ್ಲ.
ಸಂಪರ್ಕ ಕಡಿತ
ಆರಂಭದಲ್ಲಿ ದೂರವಾಣಿಯ ಮೂಲಕ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ ಮಹೇಶ್, ನಂತರದ ದಿನಗಳಲ್ಲಿ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿದ್ದಾರೆ. ಇತ್ತೀಚೆಗೆ ತಂದೆ ನಿಧನರಾದ ಸಂದರ್ಭದಲ್ಲೂ ಅವರು ಮನೆಗೆ ಬಾರದಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ತಾಯಿ ಸಿದ್ದಮ್ಮ ನೀಡಿದ ದೂರಿನ ಮೇರೆಗೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಸಂಖ್ಯೆ: 92/2026) ದಾಖಲಾಗಿದೆ.
ನಾಪತ್ತೆಯಾದ ವ್ಯಕ್ತಿಯ ಗುರುತು ಹೀಗಿದೆ
ಎತ್ತರ: 5 ಅಡಿ.
ಮೈಬಣ್ಣ: ಎಣ್ಣೆಗೆಂಪು.
ಆಕೃತಿ: ಸಾಧಾರಣ ಮೈಕಟ್ಟು.
ಭಾಷೆ: ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳನ್ನು ಮಾತನಾಡಬಲ್ಲರು.
ಕೊನೆಯದಾಗಿ ಧರಿಸಿದ್ದ ಬಟ್ಟೆ: ಹಸಿರು ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್.
ಸಾರ್ವಜನಿಕರಿಗೆ ಮನವಿ
ನಾಪತ್ತೆಯಾದ ಮಹೇಶ್ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿದಲ್ಲಿ ಕೂಡಲೇ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಚಾಮರಾಜನಗರ ಪೊಲೀಸರು ಮನವಿ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ (08226-222243), ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ (08226-222052), ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ (08226-222383) ಅಥವಾ ಪೂರ್ವ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ (ಮೊ. 9480804648) ಅವರನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.



