ನವದೆಹಲಿ : ನಟ ದರ್ಶನ್ ಸಲ್ಲಿಸಿದ್ದ ಜಾಮೀನು ನಿರ್ಬಂಧ ತಿದ್ದುಪಡಿ ಮನವಿಯನ್ನು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ತಿರಸ್ಕರಿಸಿದ್ದು, ಒಂದು ವರ್ಷದವರೆಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಾರದು ಎಂಬ ಸುಪ್ರೀಂಕೋರ್ಟ್ ಆದೇಶದಲ್ಲಿ ಸಡಿಲಿಕೆ ಕೋರಿ ದರ್ಶನ್ ಸಲ್ಲಿಸಿದ್ದ ಮನವಿಯನ್ನು “ವಿಚಾರಣೆಗೆ ಅರ್ಹವಲ್ಲ” ಎಂದು ಹೇಳಿ ರಿಜಿಸ್ಟ್ರಾರ್ ಹಂತದಲ್ಲೇ ನಿರಾಕರಿಸಲಾಗಿದೆ. ಹಾಗೂ ಅರ್ಜಿಯನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ವಕೀಲರಿಗೆ ಮಾಹಿತಿ ನೀಡಲಾಗಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ಗೆ ಈ ಹಿಂದೆ ಮೇ 16ರಂದು ಸುಪ್ರೀಂಕೋರ್ಟ್ ಜಾಮೀನು ನಿರಾಕರಿಸಿತ್ತು. ಅದೇ ವೇಳೆ, ಒಂದು ವರ್ಷದ ಒಳಗೆ ಜಾಮೀನು ಅರ್ಜಿ ಸಲ್ಲಿಸದಂತೆ ಸೂಚನೆ ನೀಡಲಾಗಿತ್ತು.
ಈ ಆದೇಶವನ್ನು ಮಾರ್ಪಡಿಸಿ ತುರ್ತು ಪರಿಸ್ಥಿತಿಗಳಲ್ಲಿ ಜಾಮೀನು ಕೋರಲು ಅವಕಾಶ ನೀಡುವಂತೆ ದರ್ಶನ್ ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂಕೋರ್ಟ್ ಆಡಳಿತಾತ್ಮಕ ಹಂತದಲ್ಲೇ ಅದನ್ನು ತಿರಸ್ಕರಿಸಿದ್ದು, ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ದಿನನಿತ್ಯ ವಿಚಾರಣೆ ನಡೆಸಿ ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. 272 ಸಾಕ್ಷಿಗಳ ಪೈಕಿ ಇನ್ನೂ ಬಹುಪಾಲು ಸಾಕ್ಷಿಗಳ ವಿಚಾರಣೆ ಬಾಕಿಯಿದ್ದು, ವಿಚಾರಣೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಅಂಶವನ್ನು ಪೀಠ ಗಮನಕ್ಕೆ ತೆಗೆದುಕೊಂಡಿತ್ತು.



