ಮೈಸೂರು : ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢ ಮಾಸದ ವಿಶೇಷ ದರ್ಶನಕ್ಕೆ ₹2,000 ಟಿಕೆಟ್ ನಿಗದಿ ಮಾಡಿರುವ ಕ್ರಮದ ಬಗ್ಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವ ಮೊದಲು ಸಭೆ ನಡೆಸಿ ಸಮಗ್ರ ಚರ್ಚೆ ಮಾಡಬೇಕಿತ್ತು. ಆದರೆ ಯಾವುದೇ ಸಭೆ ನಡೆಸದೆ ಏಕಾಏಕಿ ಈ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಮುಂದುವರೆದು, ಈ ನಿರ್ಧಾರ ಯಾವ ಆಧಾರದ ಮೇಲೆ ಕೈಗೊಳ್ಳಲಾಗಿದೆ ಎಂಬುದು ಗೊತ್ತಿಲ್ಲ. ನನಗೆ ತಿಳಿದ ಮಟ್ಟಿಗೆ ಈ ಕುರಿತು ಯಾವುದೇ ಸಭೆ ನಡೆದಿಲ್ಲ. ಸಾಮಾನ್ಯ ಭಕ್ತರ ದೃಷ್ಟಿಯಿಂದ ನೋಡಿದರೆ ಇದು ಸಮಂಜಸವಾದ ಕ್ರಮವಲ್ಲ. ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಪಡೆಯಬೇಕೇ ಅಥವಾ ದೇವಸ್ಥಾನದಲ್ಲೇ ಖರೀದಿಸಬೇಕೇ ಎಂಬುದರ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ. ಈ ಕುರಿತು ನಮಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಹೇಳಿದರು.
ಚಾಮುಂಡೇಶ್ವರಿ ದೇವಸ್ಥಾನದ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, ಈ ವಿಷಯದಲ್ಲಿ ನಮ್ಮಿಂದ ಯಾವ ರೀತಿಯ ಪ್ರತಿಕ್ರಿಯೆ ನೀಡಬೇಕೋ ಅದನ್ನು ಸೂಕ್ತ ವೇದಿಕೆಯಲ್ಲಿ ನೀಡುತ್ತೇನೆ. ₹2 ಸಾವಿರ ಟಿಕೆಟ್ ಮಾಡುವಂತಹ ನಿರ್ಧಾರ ಕೈಗೊಂಡವರಿಗೆ ದೇವರೇ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.



